![ಮಾಧ್ಯಮಗಳನ್ನು ಬೇವರ್ಸಿಗಳು, ನಾಯಿಗಳು ಎಂದ ಅನಂತ ಕುಮಾರ್ ಹೆಗಡೆ; ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಸಂಸದ ಮಾಧ್ಯಮಗಳನ್ನು ಬೇವರ್ಸಿಗಳು, ನಾಯಿಗಳು ಎಂದ ಅನಂತ ಕುಮಾರ್ ಹೆಗಡೆ; ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಸಂಸದ](https://blogger.googleusercontent.com/img/b/R29vZ2xl/AVvXsEjvul33k8Wrr7nFx2eZ-wNawrjW2qCLZdzxQzVZ1YZPR0sSMKBFM37BgnZBkCKcX30FAhKQpGKnurz1cs2gxx41qiQcJn4QPQEsqSx_5KIEkPYW6PfsV-PyKk1Qs03pUwGESqJdsjOza8WPTRjjrlYwhvU_AIU4wPUwHdfkC3OGo0AG1ylTaXNrJZGCBwst/w640-h410/hegade.jpg)
ಮಾಧ್ಯಮಗಳನ್ನು ಬೇವರ್ಸಿಗಳು, ನಾಯಿಗಳು ಎಂದ ಅನಂತ ಕುಮಾರ್ ಹೆಗಡೆ; ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಸಂಸದ
ಕಾರವಾರ: ಇತ್ತೀಚೆಗಷ್ಟೇ ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನಾಡುವ ಮೂಲಕ ರಾಜ್ಯ ರಾಜಕೀಯದಲ್ಲಿ ವಿವಾದದ ಕಿಚ್ಚು ಹೊತ್ತಿಸಿರುವ ಉತ್ತರ ಕನ್ನಡದ ಸಂಸದ ಅನಂತ ಕುಮಾರ್ ಹೆಗಡೆಯವರು ಸೋಮವಾರ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಈ ಬಾರಿ ಅವರ ಹರಿತ ನಾಲಿಗೆಗೆ ತುತ್ತಾಗಿರುವುದು ಮಾಧ್ಯಮಗಳು. ತಾವು ಹೇಳಿದ್ದರ ಬಗ್ಗೆ ಬೇವರ್ಸಿ ಮಾಧ್ಯಮಗಳು ಬೇಕಾದ್ದನ್ನು ಬರೆಯಲಿ, ಸಾಮಾಜಿಕ ಜಾಲತಾಣದಲ್ಲಿ ಬೇಕಾದ್ದ ಚರ್ಚೆ ಆಗಲಿ. ಆದರೆ, ನೀವೆಲ್ಲಾ (ಜನರು) ಇದಕ್ಕೆ ವಿಚಲಿತರಾಗಬಾರದು ಎಂದು ಹೇಳುವ ಮೂಲಕ ಅನಂತ ಕುಮಾರ್ ಹೆಗಡೆಯವರು ಕಿಡಿಕಾರಿದ್ದಾರೆ.
ನೀವು (ಬಿಜೆಪಿ ಕಾರ್ಯಕರ್ತರು) ಯಾವುದೋ ಪಕ್ಷದ ಕಾರ್ಯಕರ್ತರಲ್ಲ. ದೇಶ ಆಡಳಿತ ಮಾಡುತ್ತಿರುವ ಪಕ್ಷದ ಕಾರ್ಯಕರ್ತರು. ಬೇರೆ ಯಾರೋ ಪತ್ರಿಕೆಯಲ್ಲಿ, ವಾಟ್ಸಪ್ ನಲ್ಲಿ ಏನೇನೋ ಹೇಳಿದರು ಎಂದು ವಿಚಲಿತರಾಗಬಾರದು ಎಂದು ಅವರು ಹೇಳಿದ್ದಾರೆ.
ಆನೆ ನಡೆದಿದ್ದೇ ದಾರಿ ಎಂಬಂತೆ ನಾವು ನಡಿಯಬೇಕು ಕಣ್ರಿ ಎಂದು ಹೇಳಿದ ಅವರು, ಆನೆ ನಡಿತಾ ಇದ್ರೆ ಯಾವಗಲಾದರೂ ನಾಯಿ ಕಡೆ ಗಮನ ಕೊಡುತ್ತಾ...? ನಾಯಿಗಳಿಗೂ ಗೊತ್ತು ನಾವು ಎಷ್ಟೆ ಬೊಗಳಿದ್ರು ಆನೆಗೆ ಏನು ಮಾಡೊಕೆ ಆಗಲ್ಲ ಅಂತ. ನಾಯಿಗಳು ಬೋಗಳದೆ ಇದ್ರೆ ಆನೆ ಗಾಂಭೀರ್ಯಕ್ಕೆ ಬೆಲೆ ಇರಲ್ಲ ಎಂದು ಹೆಗಡೆ ಹೇಳಿದ್ದಾರೆ.
ಸಿದ್ದಾಮುಲ್ಲಾ ಖಾನ್ ಸರಕಾರದಲ್ಲಿ ದುಡ್ಡಿಲ್ಲ...ದಿವಾಳಿ ಎದ್ದು ಹೋಗಿದೆ
ನಮ್ಮ ಸಿದ್ದಾಮುಲ್ಲಾ ಖಾನ್ ಸರಕಾರದಲ್ಲಿ ದುಡ್ಡಿಲ್ಲ, ಗ್ಯಾರಂಟಿ ಗ್ಯಾರಂಟಿ ಹೇಳಿ ಒಂದೇ ವರ್ಷದಲ್ಲಿ ರಾಜ್ಯ ದಿವಾಳಿ ಎದ್ದು ಹೋಗಿದೆ. ಅಂಗನವಾಡಿ ಮಕ್ಕಳಿಗೆ ನೀಡುವ ಪೌಷ್ಠಿಕ ಆಹಾರ ನೀಡಲು ಕೂಡಾ ಹಿಂದೆ ಮುಂದೆ ನೋಡ್ತಿದ್ದಾರೆ. ಗ್ರಾ.ಪಂ. ಸದಸ್ಯರಿಗೆ ದೊರೆಯುವ ಮಾಸಾಶನ ಕೂಡಾ ಸರಿಯಾಗಿ ತಲುಪುತ್ತಿಲ್ಲ. ಬಿಜೆಪಿ ಸದಸ್ಯರು ಹೋಗಿ ಗಲಾಟೆ ಮಾಡಿದ ನಂತರ ಕೇವಲ ನಾಲ್ಕು ತಿಂಗಳದ್ದು ನೀಡಿದ್ದಾರೆ. ಬಿಜೆಪಿ ಸರಕಾರವಿದ್ದಾಗ ಹಣವಿರುತ್ತೆ, ಕಾಂಗ್ರೆಸ್ ಸರಕಾರವಿದ್ದಾಗ ಹಣವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ನೀಡಿದ್ದಕ್ಕಿಂತ 10 ಪಟ್ಟು ಗ್ಯಾರಂಟಿ ಬಿಜೆಪಿ ಸರಕಾರ ನೀಡಿದೆ. ನಾವು ಗ್ಯಾರಂಟಿ ಕೊಟ್ಟಿದ್ದೀವಿ ಅಂತಾ ಢಂಬಾಚಾರದ ಘೋಷಣೆಯನ್ನು ಪ್ರಧಾನಿ ಮೋದಿಯವರು ಮಾಡಿಲ್ಲ, ತನ್ನ ಯೋಜನೆಗೆ ಪ್ರಚಾರ ಮಾಡಿಕೊಂಡಿಲ್ಲ. ಇಂದು ಇಂಟರ್ ನೆಟ್ ಸ್ಪೀಡ್ ಆಗಲು, ಫಾಸ್ಟ್ ಕಮ್ಯೂನಿಕೇಶನ್ ಆಗಲು ಕೂಡಾ ಪ್ರಧಾನಿ ಮೋದಿಯವರು ಕಾರಣ. ಚುನಾವಣೆ ಬಂದಾಗ ಒಳಗಡೆ ವಾತಾವರಣ ತಯಾರಾದ್ರೆ ಸಾಕಾಗಲ್ಲ, ಹೊರಗಡೆ ವಾತಾವರಣ ಕೂಡಾ ಅಗತ್ಯವಿದೆ. ಮುಂದಿನ ಒಂದೂವರೆ ತಿಂಗಳ ಕಾಲ ಜನರು ಮಾತನಾಡಬೇಕು. ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಶೇರ್ ಮಾಡೋದಲ್ಲ. ಈ ಬಾರಿ ಬಿಜೆಪಿಯೇ ಗೆಲ್ಲೋದು ಅನ್ನೋ ಅಭಿಪ್ರಾಯ ಮೂಡಿಸುವಂತೆ ಜನರು ಚರ್ಚೆ ಮಾಡಬೇಕು'' ಎಂದು ಅವರು ಆಗ್ರಹಿಸಿದ್ದಾರೆ.