
ಒಡಿಶಾ: ಗೋ ಕಳ್ಳಸಾಗಣೆ ಶಂಕೆಯಲ್ಲಿ ಇಬ್ಬರು ದಲಿತರ ಬಾಯಿಗೆ ಹುಲ್ಲು ತುರುಕಿ ಪ್ರಾಣಿಯಂತೆ ನಡೆಸಿ, ಚರಂಡಿ ನೀರು ಕುಡಿಸಿ ತಲೆ ಬೋಳಿಸಿದ ದುಷ್ಕರ್ಮಿಗಳ ಗುಂಪು
ಬರ್ಹಂಪುರ್: ಗೋ ಕಳ್ಳಸಾಗಣೆ ಮಾಡಿದ ಶಂಕೆಯ ಮೇಲೆ ಇಬ್ಬರು ದಲಿತರ ಮೇಲೆ ಹಲ್ಲೆ ನಡೆಸಿ, ಅವರ ತಲೆ ಬೋಳಿಸಿ, ಅವರು ನೆಲದ ಮೇಲೆ ಮೊಣಕಾಲಿನಲ್ಲಿ ತೆವಳುವಂತೆ ಮಾಡಿರುವ ಆಘಾತಕಾರಿ ಘಟನೆ ಒಡಿಶಾದ ಗಂಜಂ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅಮಾನುಷ ಕೃತ್ಯದ ವಿಡಿಯೋ ವೈರಲ್ ಆಗಿದೆ. ಇಬ್ಬರ ಬಾಯಿಗೆ ಹುಲ್ಲು ತುರುಕಿ ಪ್ರಾಣಿಯಂತೆ 2 ಕಿ.ಮೀ ನಡೆಸಿದ್ದಷ್ಟೇ ಅಲ್ಲದೆ, ಚರಂಡಿ ನೀರು ಕುಡಿಸಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಧರಕೋಟೆ ಬ್ಲಾಕ್ನ ಸಿಂಗಿಪುರ ಗ್ರಾಮದ ಬುಲು ನಾಯಕ್ ಹಾಗೂ ಬಾಬುಲಾ ನಾಯಕ್ ತಮ್ಮ ಮಗಳ ಮದುವೆಗೆ ವರದಕ್ಷಿಣೆ ವ್ಯವಸ್ಥೆಯ ಭಾಗವಾಗಿ ಮೂರು ಹಸುಗಳನ್ನು ಖರೀದಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಗುಂಪೊಂದು ಅವರನ್ನು ತಡೆದಿತ್ತು.
ದನಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆಂದು ಆರೋಪಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಕೊಡಲು ನಿರಾಕರಿಸಿದಾಗ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ವೇಳೆ ಅವರಿಗೆ ಹುಲ್ಲು ತಿನ್ನಿಸಿದ್ದಷ್ಟೇ ಅಲ್ಲದೆ ಚರಂಡಿ ನೀರು ಕೂಡ ಕುಡಿಸಿದ್ದಾರೆ ಎನ್ನಲಾಗಿದೆ.