ಸಿದ್ದರಾಮಯ್ಯ-ರಾಹುಲ್ ಗಾಂಧಿ ವಿರುದ್ಧ ಭಗವಂತ ಖೂಬಾ ಹೇಳಿಕೆ ಖಂಡಿಸಿದ ಈಶ್ವರ್ ಖಂಡ್ರೆ; ಹೇಳಿದ್ದೇನು...?
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಮಾಜಿ ಸಂಸದ ಭಗವಂತ ಖೂಬಾ ನೀಡಿರುವ ನೀಚ ಹೇಳಿಕೆಗಳನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ತೀವ್ರವಾಗಿ ಖಂಡಿಸಿದ್ದಾರೆ.
ಈಶ್ವರ್ ಖಂಡ್ರೆ ಹೇಳಿಕೆ...
ಜನರಿಂದ ತಿರಸ್ಕೃತನಾಗಿ, ಕೆಲಸವಿಲ್ಲದೆ ಬೀದಿ ಬೀದಿ ಅಲೆದಾಡುತ್ತಿರುವ ಖೂಬಾ, ಸಾಂವಿಧಾನಿಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜನಪ್ರಿಯ ಮುಖ್ಯಮಂತ್ರಿಯನ್ನು “ಅರ್ಬನ್ ನಕ್ಸಲ್” ಎಂದು ಕರೆಯುವ ಮಟ್ಟಕ್ಕೆ ಇಳಿದಿರುವುದು ಅತ್ಯಂತ ಖಂಡನೀಯ.
10 ವರ್ಷ ಸಂಸದರಾಗಿ, ನಂತರ ಕೇಂದ್ರ ಸಚಿವರಾಗಿ ಜವಾಬ್ದಾರಿಯ ಹುದ್ದೆಯಲ್ಲಿ ಇದ್ದರೂ ಜಿಲ್ಲೆಗೆ ಕೊಟ್ಟ ಕೊಡುಗೆ ಶೂನ್ಯ. ಕೋವಿಡ್ ಸಮಯದಲ್ಲಿ ಜನರು ಆಸ್ಪತ್ರೆಯ ಹಾಸಿಗೆ ಸಿಗದೆ, ಔಷಧಗಳಿಗಾಗಿ ನರಳುತ್ತಿದ್ದಾಗ ಸಹಾಯ ಮಾಡಲು ಬರದೆ, ಹೇಡಿಯಂತೆ ಅಡಗಿಕೊಂಡರು. ರೆಮಿಡಿ ಸಿವೀರ್ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದರೂ ಜನರ ಕಣ್ಣೀರನ್ನು ಒರೆಸಲಿಲ್ಲ.
ಸರ್ವರಿಗೂ ಸಾಮಾಜಿಕ ನ್ಯಾಯ ದೊರಕಿಸಲು ಮುಖ್ಯಮಂತ್ರಿಗಳು ಪಂಚ ಗ್ಯಾರಂಟಿಗಳ ಮೂಲಕ ಬಡವರ ಬದುಕಿನಲ್ಲಿ ಹೊಸ ಬೆಳಕು ತಂದಿದ್ದಾರೆ. ಇಂತಹ ನಾಯಕನ ಬಗ್ಗೆ ನೀಚವಾಗಿ ಮಾತನಾಡುವುದು ಜನತೆಯ ವಿರೋಧಿ ಮನೋಭಾವ.
“ಖಾಲಿ ಡಬ್ಬ ಸದಾ ಹೆಚ್ಚು ಶಬ್ದ ಮಾಡುತ್ತದೆ” ಎಂಬ ಗಾದೆಯಂತೆ, ಜನರಿಂದ ತಿರಸ್ಕೃತ ಖೂಬಾ ಪ್ರತಿದಿನ ಪತ್ರಿಕಾ ಹೇಳಿಕೆಗಳ ಮೂಲಕ ಕಾಲ ಕಳೆಯುತ್ತಿದ್ದಾರೆ.
“ಶ್ವಾನ ಬೊಗಳಿದರೆ ಸ್ವರ್ಗಲೋಕಕ್ಕೆ ಕೇಡೆ” ಎಂಬ ಕನ್ನಡದ ಗಾದೆಯನ್ನು ನೆನಪಿಸಿಕೊಂಡು, ಇದುವರೆಗೂ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇಂದು ಮುಖ್ಯಮಂತ್ರಿಗಳು ಮತ್ತು ರಾಹುಲ್ ಗಾಂಧೀ ಅವರ ಬಗ್ಗೆ ಅವಹೇಳನ ಮಾಡಿದ ಹಿನ್ನೆಲೆಯಲ್ಲಿ ನಾನು ಇದನ್ನು ಉಗ್ರವಾಗಿ ಖಂಡಿಸುತ್ತಿದ್ದೇನೆ.