ಬೆಂಗಳೂರಿನ ರೆಸ್ಟೋರೆಂಟ್​​​​ಗೆ ಬಾಂಬ್ ಬೆದರಿಕೆ; ಆರೋಪಿಯ ಬಂಧನ; ವಿಚಾರಣೆ ವೇಳೆ ಕಾರಣ ಕೇಳಿ ಶಾಕ್ ಆದ ಪೊಲೀಸರು!

ಬೆಂಗಳೂರು: ನಗರದ ಮಹದೇವಪುರದ ಪಾಸ್ತಾ ಸ್ಟ್ರೀಟ್ ರೆಸ್ಟೋರೆಂಟ್​​​​ಗೆ ಬಾಂಬ್ ಬೆದರಿಕೆ ಹಾಕಲಾಗಿದ್ದು, ವ್ಯಕ್ತಿಯೊಬ್ಬ ರೆಸ್ಟೋರೆಂಟ್​ಗೆ ಕರೆ ಮಾಡಿ ಶೀಘ್ರದಲ್ಲೇ ರೆಸ್ಟೋರೆಂಟ್​ನಲ್ಲಿ ಬಾಂಬ್ ಸ್ಫೋಟವಾಗುತ್ತೆ ಎಂದು ಬೆದರಿಕೆ ಹಾಕಿದ್ದಾನೆ. 

ಈ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ಮಹದೇವಪುರ ಠಾಣಾ ವ್ಯಾಪ್ತಿಯ ಪಾಸ್ತಾ ಸ್ಟ್ರೀಟ್ ರೆಸ್ಟೋರೆಂಟ್​ಗೆ ತಡರಾತ್ರಿ ಕರೆ ಬಂದಿದ್ದು, ಶೀಘ್ರದಲ್ಲೇ ಬಾಂಬ್ ಸ್ಫೋಟವಾಗುತ್ತದೆ ಎಂದು ಬೆದರಿಕೆ ಹಾಕಿ ಕಾಲ್ ಕಟ್ ಮಾಡಲಾಗಿದೆ. ಕೂಡಲೇ ರೆಸ್ಟೋರೆಂಟ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರಾತ್ರಿ ಇಡೀ ಪರಿಶೀಲನೆ ನಡೆಸಿದ್ದಾರೆ.

ಬಳಿಕ ಅನುಮಾನ ಮೂಡಿದ ಹಿನ್ನೆಲೆ ಇಂದಿರಾನಗರ ಬ್ರಾಂಚ್​ನಲ್ಲಿ ಕೆಲಸ ಮಾಡುತ್ತಿದ್ದ ವೇಲು ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪೊಲೀಸರೇ ಶಾಕ್ ಆಗಿದ್ದಾರೆ. ಸಂಬಳ ಕೊಡದ ಹಿನ್ನೆಲೆ ತಾನು ರೆಸ್ಟೋರೆಂಟ್​ಗೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದಾಗಿ ವೇಲು ಬಾಯಿಬಿಟ್ಟಿದ್ದಾನೆ. ಪ್ರಕರಣ ಸಂಬಂಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.