ಮಾಂಸ ವ್ಯಾಪಾರಿಗಳಿಬ್ಬರನ್ನು ಥಳಿಸಿ, ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ಕೊಲೆ ಬೆದರಿಕೆ: ಪೊಲೀಸ್ ಸಿಬ್ಬಂದಿ ಸೇರಿ ಏಳು ಮಂದಿ ವಿರುದ್ಧ FIR; ಮೂವರು ಪೋಲೀಸರ ಅಮಾನತು

ನವದೆಹಲಿ: ಇಬ್ಬರು ಮಾಂಸ ವ್ಯಾಪಾರಿಗಳಿಬ್ಬರಿಗೆ 3 ಮಂದಿ ಪೊಲೀಸರು ಸೇರಿದಂತೆ  ಒಟ್ಟು 7 ಮಂದಿ ಆರೋಪಿಗಳು  ಥಳಿಸಿ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. 

ಈ ಪ್ರಕರಣದಲ್ಲಿ ಸಹಾಯಕ ಸಬ್​ಇನ್ಸ್​​ಪೆಕ್ಟರ್​ ಸೇರಿ 3 ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ಈ ಬಗ್ಗೆ ಪೂರ್ವ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಘಟನೆಯ ಮಾಹಿತಿ ನೀಡಿದ್ದಾರೆ.

ಮಾರ್ಚ್ 7ರಂದು ದೆಹಲಿಯ ಆನಂದ್ ವಿಹಾರ್ ಪ್ರದೇಶದಲ್ಲಿ ಮಾಂಸ ವ್ಯಾಪಾರಿಗಳಾದ ಮುಸ್ತಫಾಬಾದ್ ನಿವಾಸಿ ನವಾಬ್ ಹಾಗೂ ತಮ್ಮಆತನ ಸಂಬಂಧಿ ಶೋಯೆಬ್ ಕಾರಿನಲ್ಲಿ ಮನೆಗೆ ಹೊರಟಿದ್ದರು. ಈ ವೇಳೆ ಸ್ಕೂಟರ್​ವೊಂದಕ್ಕೆ ಇವರ ಕಾರು ಡಿಕ್ಕಿ ಹೊಡೆದಿದೆ. ಸ್ಕೂಟರ್ ಚಾಲಕ ನಷ್ಟ ಪರಿಹಾರವಾಗಿ ಮಾಂಸ ವ್ಯಾಪಾರಿಗಳಿಂದ 4,000 ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಈ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಸಹಾಯಕ ಸಬ್​ ಇನ್ಸ್​ಪೆಕ್ಟರ್​ ಜೊತೆ ಇಬ್ಬರು ಪೊಲೀಸ್​ ಕಾನ್ಸ್​ಟೇಬಲ್​ ಜೀಪ್‌ನಲ್ಲಿ​ ಆಗಮಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಬಳಿಕ ಮಾಂಸ ವ್ಯಾಪಾರಿಗಳಿಂದ 2,500 ರೂಪಾಯಿ ಪಡೆದು ಸ್ಕೂಟರ್ ನಷ್ಟದ ಹಣವಾಗಿ ಚಾಲಕನಿಗೆ ಪೊಲೀಸರು ಕೊಟ್ಟಿದ್ದಾರೆ. ಕಾರಿನಲ್ಲಿ ಮಾಂಸವಿದ್ದ ಕಾರಣ 15 ಸಾವಿರ ರೂ. ಕೊಡುವಂತೆ ಪೊಲೀಸರು ವ್ಯಾಪಾರಿಗಳ ಮುಂದೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದೇ ಇದ್ದರೆ ಠಾಣೆಗೆ ಕರೆದುಕೊಂಡು ಹೋಗುವುದಾಗಿಯೂ ಬೆದರಿಕೆ ಒಡ್ಡಿದ್ದು, ಇದಕ್ಕೆ ಒಪ್ಪದಾಗ ಇತರ 4 ಜನರನ್ನು ಕರೆದ ಪೊಲೀಸರು,  ವ್ಯಾಪಾರಿಗಳಿಬ್ಬರನ್ನು ತಮ್ಮೊಂದಿಗೆ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.

ನವಾಬ್ ಮತ್ತು ಶೋಯೆಬ್ ಇಬ್ಬರನ್ನು ಥಳಿಸಿದ ಪೊಲೀಸರು, ಇಬ್ಬರ ಕೈಗಳಿಗೆ ಚಾಕುವಿನಿಂದ ಇರಿಯಲು ಯತ್ನಿಸಿದ್ದು, ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ಬಳಿಕ ಪೊಲೀಸರು ವ್ಯಾಪಾರಿಗಳಿಗಿಬ್ಬರಿಗೆ ಮತ್ತಿನ ಚುಚ್ಚು ಮದ್ದು ನೀಡಿ 25 ಸಾವಿರ ರೂಪಾಯಿ ಕಿತ್ತುಕೊಂಡು ಖಾಲಿ ಕಾಗದದ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಸಂತ್ರಸ್ತರು ದೂರಿನಲ್ಲಿಆರೋಪಿಸಿದ್ದಾರೆ.

ಈ ಘಟನೆಯ ಬಗ್ಗೆ ಸಂತ್ರಸ್ತರು ಪೊಲೀಸ್​ ಠಾಣೆಗೆ ದೂರು ನೀಡಿದ 4 ದಿನಗಳ ನಂತರ FIR ದಾಖಲಾಗಿದ್ದು, ಎಲ್ಲ 7 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸೇರಿ ಮೂವರನ್ನೂ ಅಮಾನತು ಮಾಡಲಾಗಿದೆ ಎಂದು ಪೊಲೀಸ್​​ ಅಧಿಕಾರಿ ಹೇಳಿದ್ದಾರೆ.

ಇಬ್ಬರೂ ಮಾಂಸ ವ್ಯಾಪಾರಿಗಳಿಗೆ ಗಾಯಗಳಾಗಿದ್ದು, ಅವರನ್ನು ಜಿಟಿಬಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಮಾರ್ಚ್ 10 ರಂದು ಸುಲಿಗೆ ಹಾಗು ಉದ್ದೇಶಪೂರ್ವಕ ನೋವುಂಟು ಮಾಡಿದ ಆರೋಪದಡಿ FIR ದಾಖಲಿಸಲಾಗಿದೆ.