ಬಾಡಿಗೆಗೆಂದು ಹೋಗಿ ನಾಪತ್ತೆಯಾಗಿದ್ದ ರಿಕ್ಷಾ ಚಾಲಕ; ಸಂಶಯಾಸ್ಪದ ರೀತಿಯಲ್ಲಿ ಮೃತ್ಯು; ಉಪ್ಪೂರು ನದಿಯಲ್ಲಿ ಶವ ಪತ್ತೆ

ಉಡುಪಿ: ಬಾಡಿಗೆಗೆ ಹೋದ ಆಟೋ ರಿಕ್ಷಾ ಚಾಲಕನೋರ್ವ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದ ಮಾಯಾಡಿ ಎಂಬಲ್ಲಿ ನಡೆದಿದೆ. 

ಮೂಡುತೋನ್ಸೆ ಗ್ರಾಮದ ಮಹಮ್ಮದ್‌ ಫೈಜಲ್‌ (36) ಮೃತಪಟ್ಟ ಆಟೋ ಚಾಲಕ. ಇವರು ಮಾ. 27ರಂದು ರಾತ್ರಿ ಬಾಡಿಗೆಗೆ ಹೋಗಲಿಕ್ಕೆ ಇದೆಯೆಂದು ಮನೆಯಿಂದ ತೆರಳಿದ್ದರು. ಬಳಿಕ‌ ಮನೆಗೆ ಬಾರದೆ, ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಅವರ ಶವ ಉಪ್ಪೂರು ಗ್ರಾಮದ ಮಾಯಾಡಿ ಎಂಬಲ್ಲಿ ಸುವರ್ಣ ನದಿಯಲ್ಲಿ ಪತ್ತೆಯಾಗಿದೆ. ಫೈಜಲ್‌ ಅವರು ಸುವರ್ಣ ನದಿಯ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದು, ಅವರ ಸಾವಿನಲ್ಲಿ ಸಂಶಯವಿದೆ ಎಂದು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.