
ಪೋಕ್ಸೋ ಪ್ರಕರಣ: ಜೈಲು ಸೇರಿದ್ದ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಬಿಡುಗಡೆ
ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಬಿಡುಗಡೆಯಾಗಿ ಜೈಲಿನಿಂದ ಹೊರಬಂದಿದ್ದಾರೆ.
ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಪಟ್ಟ ಸಾಕ್ಷ್ಯಗಳ ವಿಚಾರಣೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶವನ್ನು ಹೊರಡಿಸಿತ್ತು. ಈ ಹಿಂದೆ ಹೈಕೋರ್ಟ್ ಮುರುಘಾಶ್ರೀಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ, ಸಾಕ್ಷಗಳ ವಿಚಾರಣೆ ಮುಗಿಯುವವರೆಗೂ ಬಂಧನದಲ್ಲಿಡಲು ಸುಪ್ರೀಂಕೋರ್ಟ್ ಕಳೆದ ಏಪ್ರಿಲ್ 23ರಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಜಾಮೀನು ಸಿಕ್ಕರೂ ಶ್ರೀಗಳು ಜೈಲಿಗೆ ಮತ್ತೆ ಹೋಗಬೇಕಾಗಿ ಬಂದಿತ್ತು.
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯರಿಬ್ಬರು ಸೇರಿದಂತೆ 12 ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಜಾಮೀನಿನ ಆದೇಶದ ಪ್ರಕಾರ ಮುರುಘಾಶ್ರೀ ಬಿಡುಗಡೆ ಮಾಡಬೇಕಿತ್ತು. ಆದೇಶದ ಪ್ರತಿ ಜಿಲ್ಲಾ ಕಾರಾಗೃಹ ಅಧಿಕಾರಿಗಳ ಕೈ ಸೇರಿದ್ದು ಪ್ರಕ್ರಿಯೆಗಳು ಮುಗಿದ ನಂತರ ಶ್ರೀಗಳು ಜೈಲಿನಿಂದ ಹೊರಬಂದಿದ್ದಾರೆ. ಇನ್ನು ಹೈಕೋರ್ಟ್ ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಮುರುಘಾಶ್ರೀ ಇರುವಂತಿಲ್ಲ ಎಂದು ಷರತ್ತು ವಿಧಿಸಿ ಜಾಮೀನು ನೀಡಿದ್ದರಿಂದ ಅವರು ದಾವಣಗೆರೆಗೆ ತೆರಳಲಿದ್ದಾರೆ.