ಸಿರಿಯಾದಲ್ಲಿ ಭುಗಿಲೆದ್ದ ಹಿಂಸಾಚಾರ ಹಿನ್ನೆಲೆ: ಸಿರಿಯಾದಿಂದ ಕೂಡಲೇ ಹೊರಡುವಂತೆ ಭಾರತೀಯ ಪ್ರಜೆಗಳಿಗೆ ಕೇಂದ್ರ ಸರ್ಕಾರ ಸೂಚನೆ
ಡೆಮಾಸ್ಕಸ್: ಸಿರಿಯಾದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಈ ಬಗ್ಗೆ ಭಾರತ ಸರ್ಕಾರ ಕಳವಳ ವ್ಯಕ್ತಪಡಿಸಿದರೆ. ಆದಷ್ಟು ಬೇಗ ಅಲ್ಲಿಂದ ಭಾರತಕ್ಕೆ ವಾಪಸ್ ಆಗಿ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಸೂಚನೆ ನೀಡಿದೆ.
ಸಿರಿಯಾದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ವಿದೇಶಾಂಗ ಸಚಿವಾಲಯ ಡಿಸೆಂಬರ್ 6ರ ಮಧ್ಯರಾತ್ರಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸಿರಿಯಾಗೆ ಅಥವಾ ಸಿರಿಯಾ ಮೂಲಕ ಯಾರೂ ಪ್ರಯಾಣಿಸಬೇಡಿ ಎಂದು ಎಚ್ಚರಿಸಿದೆ.
ಜೊತೆಗೆ ಸಿರಿಯಾಲ್ಲಿರುವ ಭಾರತೀಯ ನಾಗರೀಕರು ಈ ತಕ್ಷಣವೇ ಹೊರಟುಬರಲು ಸೂಚಿಸಿದೆ. ಲಭ್ಯವಿರುವ ವಾಣಿಜ್ಯ ವಿಮಾನಗಳ ಮೂಲಕ ತಕ್ಷಣವೆ ಹೊರಟು ಬರಲು ಸೂಚನೆ ನೀಡಿದೆ.
ಹಯಾತ್ ತಹ್ರೀರ್ ಅಲ್-ಶಾಮ್ ನೇತೃತ್ವದ ದಂಗೆಕೋರರು ಸಿರಿಯಾದ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಬಿಕ್ಕಟ್ಟು ತಲೆದೋರಿದ್ದು, ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಭಾರತದ ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿದ್ದು, ಅನಗತ್ಯ ಪ್ರಯಾಣ ಮುಂದೂಡಿ. ಲಭ್ಯವಿರುವ ವಾಣಿಜ್ಯ ವಿಮಾನಗಳ ಮೂಲಕ ಸಿರಿಯಾ ತೊರೆದು, ಆದಷ್ಟು ಬೇಗ ವಾಪಸ್ ಬನ್ನಿ ಎಂದು ಸಲಹೆ ನೀಡಿದೆ.
ಪ್ರಸ್ತುತ ಸಿರಿಯಾದಲ್ಲಿರುವ ಭಾರತೀಯ ಪ್ರಜೆಗಳು ಡಮಾಸ್ಕಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಿ. ಭಾರತೀಯ ಪ್ರಜೆಗಳಿಗೆ ತುರ್ತು ಸಹಾಯವಾಣಿ ಸಂಖ್ಯೆ +963 993385973 ಹಾಗೂ hoc.domascus@mea.gov.in ಇಮೇಲ್ ಐಡಿ ಮೂಲಕ ಸಂಪರ್ಕಿಸುವಂತೆ ತಿಳಿಸಿವೆ.
ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಅವರು ಮಾತನಾಡಿ, ಸಿರಿಯಾದ ಉತ್ತರದಲ್ಲಿ ಇತ್ತೀಚಿನ ಪರಿಸ್ಥಿತಿಯನ್ನು ಗಮನಿಸಲಾಗಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಸಿರಿಯಾದಲ್ಲಿ ಸುಮಾರು 90 ಭಾರತೀಯರಿದ್ದಾರೆ, ಇದರಲ್ಲಿ 14 ಮಂದಿ ಯುಎನ್ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ವಿದೇಶಾಂಗ ಸಚಿವಾಲಯ ಸುರಕ್ಷತೆ ಮತ್ತು ಭದ್ರತೆಗಾಗಿ ಭಾರತೀಯರೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ಹೇಳಿದ್ದಾರೆ.
ಸಿರಿಯಾದಲ್ಲಿ ರಷ್ಯಾ ಹಾಗೂ ಇರಾನ್ ಬೆಂಬಲಿತ ಬಶರ್ ಅಲ್ ಅಸ್ಸಾದ್ ನೇತೃತ್ವದ ಸರ್ಕಾರವಿದೆ. ಆದರೆ, ಈ ಸರ್ಕಾರ ವಿರುದ್ಧ ಸ್ಥಳೀಯ ಬಂಡುಕೋರರ ಗುಂಪು ತಿರುಗಿ ಬಿದ್ದಿದೆ. ಟರ್ಬಿ ಬೆಂಬಿಲಿತ ಈ ಬಂಡಾಯ ಗುಂಪು ಕಳೆದ ವಾರ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಕಿತ್ತೆಸೆಯುವ ಎಚ್ಚರಿಕೆ ನೀಡಿತ್ತು. ಸಿರಿಯಾದ ಹಲವು ನಗರಗಳ ಮೇಲೆ ಈ ಗುಂಪು ದಾಳಿ ನಡೆಸಿದೆ. ಭಾರೀ ಹಿಂಸಾಚಾರದ ಮೂಲಕ ನಗರಗಳನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಸರ್ಕಾರದ ಪ್ರಮುಖ ಕೇಂದ್ರಗಳನ್ನು ಗುರಿ ಮಾಡಿಕೊಂಡಿದ್ದಾರೆ.
ಈಗಾಗಲೇ ಹಲವು ನಗರಗಳು ಈ ಬಂಡುಕೋರರ ಕೈಸೇರಿದೆ. ಅಲೆಪ್ಪೋ, ಹಮಾ ಸೇರಿದಂತೆ ಕೆಲ ನಗರಗಳು ಇದೀಗ ಬಂಡಾಯ ಗುಂಪಿನ ಕೈಯಲ್ಲಿದೆ. ಇಲ್ಲಿ ಹಿಂಸಾಚಾರ ಹೆಚ್ಚಾಗಿದೆ. ಈ ಗುಂಪು ಡಮಾಸ್ಕಸ್ ಸೇರಿದಂತೆ ಕೆಲ ನಗರಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಹಲವು ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಅಧ್ಯಕ್ಷ ಬಶರ್ ಅಲ್ ಆಡಳಿತ ಕೇಂದ್ರಗಳಿಂದ ಕೇವಲ 5 ರಿಂದ 10 ಕಿಲೋಮೀಟರ್ ದೂರದ ವರೆಗೂ ಈ ಬಂಡಾಯ ಗುಂಪು ಹಿಡಿತ ಸಾಧಿಸಿದೆ.
ಬಶರ್ ಅಲ್ ಅಸ್ಸಾದ್ ಕಿತ್ತೆಸೆಯಲು ಹಲವು ಹೋರಾಟಗಳು ನಡೆಯುತ್ತಿದೆ. ಸಂಪೂರ್ಣ ಸಿರಿಯಾ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಈ ಬಂಡುಕೋರರ ಗುಂಪುಗಳು ಸಜ್ಜಾಗಿದೆ. ಹೀಗಾಗಿ ಸಿರಿಯಾದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.