![ಉಡುಪಿ: ನಾಳೆ (ಡಿ.21) ಗೋ. ಮಧುಸೂದನ್ ಅವರ ಭಗವಾನುವಾಚ ಪುಸ್ತಕ ಲೋಕಾರ್ಪಣೆ ಉಡುಪಿ: ನಾಳೆ (ಡಿ.21) ಗೋ. ಮಧುಸೂದನ್ ಅವರ ಭಗವಾನುವಾಚ ಪುಸ್ತಕ ಲೋಕಾರ್ಪಣೆ](https://blogger.googleusercontent.com/img/b/R29vZ2xl/AVvXsEgqBlCj6iMs22QZllRz5WbiZpy0WAWZaxR0IC7dTKVeW5a6SeppTvQ1D9Ra1wOQc7cWaiO5jPx0Pb2Bagk6qmUO_LsKt8g_IBvnwhp5lT_Mq1cUgxAyd3wMDyTPfcwvY3ssY2WoQXMXWFDjyD5w1UgAy-e9fIUC7CqNPV3B_UjGfj1p4Y5Zs5gFzTw_mIjy/w640-h360/7ae1858c-0749-4b51-8c00-9795faf4501a.jpg)
ಉಡುಪಿ: ನಾಳೆ (ಡಿ.21) ಗೋ. ಮಧುಸೂದನ್ ಅವರ ಭಗವಾನುವಾಚ ಪುಸ್ತಕ ಲೋಕಾರ್ಪಣೆ
ಉಡುಪಿ: ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಶ್ರೀಕೃಷ್ಣಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದಲ್ಲಿ ಡಿ.21ರಂದು ಸಂಜೆ 5.30ಕ್ಕೆ ಶ್ರೀ ಭಗವಾನುವಾಚ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ್ ತಿಳಿಸಿದರು.
ಈ ಕುರಿತು ಕೃಷ್ಣಮಠದ ಕನಕಮಂಟಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪರ್ಯಾಯ ಶ್ರೀ ಸುಗುಣೇಂದ್ರತಿರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ ಸುಶೀಂದ್ರತಿರ್ಥ ಶ್ರೀಪಾದರು ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮುಖ್ಯ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಹಿರಿಯ ಪತ್ರಕರ್ತ ಸುರೇಂದ್ರ ವಾಗ್ಲೆ ಭಾಗವಹಿಸಲಿದ್ದಾರೆ ಎಂದರು.
ಪುತ್ತಿಗೆ ಶ್ರೀಗಳ ಕೋಟಿ ಗೀತಾ ಲೇಖನ ಯಜ್ಞದಲ್ಲಿ ದೀಕ್ಷೆ ಸ್ವೀಕರಿಸಿ ಗೀತೆಯನ್ನು ಬರೆದ ಮೇಲೆ ಇದರ ಬಗ್ಗೆ ಉನ್ನತ ಅಧ್ಯಯನ ಕೈಗೊಳ್ಳುವ ಇಚ್ಛೆ ಉಂಟಾಯಿತು. ದಿನಕ್ಕೆ 8 ರಿಂದ 10 ಗಂಟೆ ಬಗ್ಗೆ ಗೀತೆ ಬಗ್ಗೆ ಚಿಂತನ ಮಂಥನ ಕೈಗೊಂಡು, ಕುರುಕ್ಷೇತ್ರ, ದ್ವಾರಕಾ ಮುಂತಾದ ಕ್ಷೇತ್ರಗಳಿಗೆ ಭೇಟಿ ನೀಡಿ, ಪುಸ್ತಕ ಬರೆದಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಂಜಿಎಂ ಕಾಲೇಜು ನಿವೃತ್ತ ಪ್ರಾಂಶುಪಾಲ ವಿಜಯ್, ಮಠದ ದಿವಾನ್ ನಾಗರಾಜ ಆಚಾರ್ಯ, ಪ್ರಮುಖರಾದ ರಮೇಶ್ ಭಟ್, ಪ್ರಮೋದ್ ಭಟ್ ಉಪಸ್ಥಿತರಿದ್ದರು.