ಸಿ ಟಿ ರವಿ ಪ್ರಕರಣ: ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಹೈಕೋರ್ಟ್ ಅಕ್ಷರಶಃ ಕಪಾಳಮೋಕ್ಷ ಮಾಡಿದೆ: ಬಿ ವೈ ವಿಜಯೇಂದ್ರ
ಬೆಂಗಳೂರು: ಎಂಎಲ್ಸಿ ಸಿ ಟಿ ರವಿಗೆ ಮಧ್ಯಂತರ ಜಾಮೀನು ನೀಡುವ ಮೂಲಕ ಹೈಕೋರ್ಟ್ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಅಕ್ಷರಶಃ ಕಪಾಳಮೋಕ್ಷ ಮಾಡಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಶುಕ್ರವಾರ ಮಾತನಾಡಿದ ಅವರು, ಘಟನೆಯ ಬಗ್ಗೆ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ರವಿ ಅವರಿಗೆ ನೋಟಿಸ್ ಜಾರಿ ಮಾಡದ ಕಾರಣ ಅವರನ್ನು ಬಂಧಿಸಿರುವುದು ಕಾನೂನುಬಾಹಿರ ಎಂದು ತಿಳಿಸಿದೆ. "ಬಿಜೆಪಿ ಎಂಎಲ್ಸಿಯನ್ನು ಭಯೋತ್ಪಾದಕನಂತೆ ಮತ್ತು ಪ್ರಾಣಿಯಂತೆ ನಡೆಸಿಕೊಳ್ಳಲಾಗಿದೆ. ದೇಶವು ಈ ಹಿಂದೆ ಇಂತಹ ಘಟನೆಗೆ ಸಾಕ್ಷಿಯಾಗಿರಲಿಲ್ಲ. ನ್ಯಾಯಾಲಯದ ಆದೇಶವು ಕರ್ನಾಟಕದ 'ಹಿಟ್ಲರ್-ಸರ್ಕಾರ'ಕ್ಕೆ ಸ್ಪಷ್ಟ ಕಪಾಳಮೋಕ್ಷವಾಗಿದೆ," ಎಂದು ಅವರು ಹೇಳಿದರು.
ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ನಾಯಕರೊಂದಿಗೆ ಸಮಾಲೋಚಿಸಿದ ನಂತರ ಮುಂದಿನ ಕ್ರಮವನ್ನು ನಿರ್ಧರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಬೆಳಗಾವಿಯ ಸುವರ್ಣ ಸೌಧಕ್ಕೆ ನುಗ್ಗಿ ಎಂಎಲ್ಸಿ ಮೇಲೆ ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ‘ರಾಜಕೀಯ ಷಡ್ಯಂತ್ರ ನಡೆದಿದ್ದು, ಚುನಾಯಿತ ಜನಪ್ರತಿನಿಧಿಗೆ ಈ ರೀತಿಯಾದರೆ, ಜನಸಾಮಾನ್ಯರ ಪಾಡೇನು?’ ಎಂದು ಶಾಸಕ ವಿಜಯೇಂದ್ರ ಪ್ರಶ್ನಿಸಿದ್ದಾರೆ. ಸಿ.ಟಿ. ರವಿಯನ್ನು 500 ಕಿಮಿ ಸುತ್ತಿಸಿದ್ದಾರೆ. ಇದು ಹಿಟ್ಲರ್ ಸರ್ಕಾರವೋ? ಕಾಂಗ್ರೆಸ್ ಸರ್ಕಾರವೋ? ಅಂತ ವಿಜಯೇಂದ್ರ ಪ್ರಶ್ನಿಸಿದ್ರು. ತುರ್ತು ಪರಿಸ್ಥಿತಿ ಹೇರಿರುವ ಕುಖ್ಯಾತಿ ಕಾಂಗ್ರೆಸ್ ಪಕ್ಷದ್ದು. ನೆತ್ತಿಯ ಮೇಲೆ ರಕ್ತ ಬಂದ್ರೂ ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ ಅಂತ ಆರೋಪಿಸಿದರು. ಸಿದ್ದರಾಮಯ್ಯನವರೇ, ಅಧಿಕಾರ ಶಾಶ್ವತವಲ್ಲ. ಅಧಿಕಾರದ ಮದದಿಂದ ಹಲ್ಲೆ ಮಾಡುವ ಕೆಲಸ ಮಾಡ್ತಿದ್ದಾರೆ. ಪ್ರತಿ ಅರ್ಧಗಂಟೆಗೆ ಕರೆ ಮಾಡಿ ಯಾರೋ ಸೂಚನೆ ಕೊಡ್ತಿದ್ರು ಎಂದು ಸಿಟಿ ರವಿ ಹೇಳಿದ್ದಾರೆ. ಸಿಟಿ ರವಿ ಉಗ್ರಗಾಮಿಯಾ? ಟೆರರಿಸ್ಟಾ? ಅಂತ ವಿಜಯೇಂದ್ರ ಖಾರವಾಗಿ ಪ್ರಶ್ನಿಸಿದರು.