ಮನು ಭಾಕರ್, ಗುಕೇಶ್ ಸೇರಿದಂತೆ ನಾಲ್ವರು ಕ್ರೀಡಾ ಸಾಧಕರಿಗೆ ಖೇಲ್ ರತ್ನ ಪ್ರಶಸ್ತಿ ಘೋಷಣೆ
ನವದೆಹಲಿ: ಒಲಿಂಪಿಕ್ಸ್ ಶೂಟಿಂಗ್ನಲ್ಲಿ 2 ಕಂಚಿನ ಪದಕ ಗೆದ್ದ ಮನು ಭಾಕರ್ (Manu Bhaker) ಮತ್ತು ವಿಶ್ವ ಚೆಸ್ ಚಾಂಪಿಯನ್ ಶಿಪ್ ಗೆದ್ದ ಡಿ ಗುಕೇಶ್ (D Gukesh) ಅವರಿಗೆ ಖೇಲ್ ರತ್ನ ( Khel Ratna Award) ಪ್ರಶಸ್ತಿ ಘೋಷಣೆಯಾಗಿದೆ.
ಭಾರತದ ಪುರುಷರ ಹಾಕಿ ತಂಡದ ನಾಯಕ ಹರ್ಮನ್ಪ್ರೀತ್ ಸಿಂಗ್ (Harmanpreet Singh ) ಮತ್ತು ಪ್ಯಾರಾಲಿಂಪಿಯನ್ ಪ್ರವೀಣ್ ಕುಮಾರ್ (Praveen Kumar), ಮನು ಭಾಕರ್, ಗುಕೇಶ್ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ಜನವರಿ 17 ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮತ್ತು ಸರಿಯಾದ ಪರಿಶೀಲನೆಯ ನಂತರ ಕ್ರೀಡಾಪಟುಗಳು, ತರಬೇತುದಾರರು, ವಿಶ್ವವಿದ್ಯಾಲಯ ಮತ್ತು ಘಟಕಗಳಿಗೆ ಪ್ರಶಸ್ತಿಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಕ್ರೀಡಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಆರಂಭದಲ್ಲಿ ಖೇಲ್ ರತ್ನ ಪ್ರಶಸ್ತಿ ಪಟ್ಟಿಯಲ್ಲಿ ಮನು ಭಾಕರ್ ಹೆಸರು ಇಲ್ಲ ಎಂದು ವರದಿಯಾಗಿತ್ತು. ಈ ಬೆನ್ನಲ್ಲೇ ಮನು ಭಾಕರ್ ಅವರ ತಂದೆ ಕ್ರೀಡಾ ಸಚಿವಾಲಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಕ್ರೀಡಾ ಸಚಿವಾಲಯ ಈಗ ಅಧಿಕೃತವಾಗಿ ಪಟ್ಟಿ ಪ್ರಕಟಿಸುವ ಮೂಲಕ ಎದ್ದಿದ್ದ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದೆ.