
ವಿಪಕ್ಷಗಳ ಅಭಿಪ್ರಾಯ ಕಡೆಗಣಿಸಿ ಏಕಾಏಕಿ ವಕ್ಫ್ ತಿದ್ದುಪಡಿ ವಿಧೇಯಕ ಮಂಡನೆ; ಆಡಳಿತ ಪಕ್ಷದ ಸರ್ವಾಧಿಕಾರಿ ಧೋರಣೆ: ಶೇಖ್ ವಾಹಿದ್ ದಾವೂದ್
ಉಡುಪಿ: ಭಾರೀ ವಿವಾದಕ್ಕೆ ಕಾರಣವಾಗಿರುವ ವಕ್ಫ್ ತಿದ್ದುಪಡಿ ವಿಧೇಯಕವನ್ನು ವಿರೋಧ ಪಕ್ಷಗಳ ಸದಸ್ಯರ ಅಭಿಪ್ರಾಯಗಳನ್ನು ಕಡೆಗಣಿಸಿ ಏಕಾಏಕಿ ತೀರ್ಮಾನ ಕೈಗೊಂಡಿರುವುದು ಆಡಳಿತ ಪಕ್ಷದ ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಶೇಖ್ ವಾಹಿದ್ ದಾವೂದ್ ಹೇಳಿದ್ದಾರೆ.
ವಕ್ಸ್ ತಿದ್ದುಪಡಿ ವಿಧೇಯಕಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿಯು ಮುಸ್ಲಿಂ ಸಮುದಾಯವನ್ನು ತೀವ್ರ ಆತಂಕಕ್ಕೆ ತಳ್ಳಿದ್ದು, ಕೇಂದ್ರ ಸರ್ಕಾರದ ವಕ್ಸ್ ತಿದ್ದುಪಡಿ ವಿಧೇಯಕವನ್ನು ಯಾವುದೇ ಬದಲಾವಣೆಯಿಲ್ಲದೆ ಅನುಮೋದಿಸಿರುವುದು ಅತ್ಯಂತ ನಿರಾಶಾದಾಯಕ ಬೆಳವಣಿಗೆಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತದ ಅತ್ಯಂತ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿರುವ, ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ದೇಶ ಕಟ್ಟುವ ಕೆಲಸದಲ್ಲೂ ನಿರ್ಣಾಯಕ ಪಾತ್ರ ವಹಿಸಿರುವ ಮುಸ್ಲಿಂ ಸಮುದಾಯವು ಆಡಳಿತ ವರ್ಗದಿಂದ ಅನ್ಯಾಯಕ್ಕೊಳಗಾಗುತ್ತಲೇ ಇದೆ. ಸಂವಿಧಾನದತ್ತ ಹಕ್ಕುಗಳನ್ನು ಕಬಳಿಸುವ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗಾಳಿಗೆ ತೂರುವ ಕೃತ್ಯವಾಗಿದ್ದು, ವಿಶೇಷತಃ ಮುಸ್ಲಿಮರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ ಎಂದು ಶೇಖ್ ವಾಹಿದ್ ದಾವೂದ್ ಕಳವಳ ವ್ಯಕ್ತಪಡಿಸಿದ್ದಾರೆ.