ಉಡುಪಿ: ಮೇ 31ರಂದು 'ಯಕ್ಷಗಾನ ಕಲಾವಿದರ ಸಮಾವೇಶ'

ಉಡುಪಿ: ಮೇ 31ರಂದು 'ಯಕ್ಷಗಾನ ಕಲಾವಿದರ ಸಮಾವೇಶ'

ಉಡುಪಿ: ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ 'ಯಕ್ಷಗಾನ ಕಲಾವಿದರ ಸಮಾವೇಶ' ಇದೇ ಮೇ 31ರಂದು ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ್ ರಾವ್ ತಿಳಿಸಿದರು. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಬೆಳಿಗ್ಗೆ 9ಗಂಟೆಗೆ ಕಲಾವಿದರಿಗೆ ಕೆಎಮ್‌ಸಿ ಮಣಿಪಾಲ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಯಲಿದೆ. ಬೆಳಿಗ್ಗೆ 10ಗಂಟೆಗೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ್ ಶೆಟ್ಟಿ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಬಳಿಕ 10.30ಕ್ಕೆ ಮಾಧವ ಮಾತೃ ಗ್ರಾಮಂ ಕೂಡಿಯಾಟ್ಟಂ ಗುರುಕುಲಂ ಇಞ್ಞಾಲಕುಡ, ತ್ರಿಶೂರ್ ಇವರಿಂದ "ಕೂಡಿಯಾಟ್ಟಂ", "ಸೀತಾಪಹರಣಂ-ಜಟಾಯುವಧಂ"  ಪ್ರದರ್ಶನಗೊಳ್ಳಲಿದೆ. 11.30ಕ್ಕೆ ಯಕ್ಷಗಾನ ಕಲಾವಿದರಿಗೆ "ಕಲೆ ಪೂರ್ಣಾವಧಿ ಉದ್ಯೋಗವಾಗಿರಬೇಕೆ.. ಉಪವೃತ್ತಿಯಾಗಿರಬೇಕೆ..?" ವಿಷಯದ ಕುರಿತು ಚರ್ಚೆ ಕಾರ್ಯಕ್ರಮ ನಡೆಯಲಿದೆ ಎಂದರು

ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ, ಮಧ್ಯಾಹ್ನ 2.30ಕ್ಕೆ ನಡೆಯುವ ಸಮಾರೋಪದಲ್ಲಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರು ಹಾಗೂ ಕಿರಿಯ ಶ್ರೀ ಸುಶೀಂಧ್ರತೀರ್ಥರು 50 ಮಂದಿ ಹಿರಿಯ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರು ಆರ್ಶೀವಚನ ನೀಡಲಿದ್ದಾರೆ. ಉದ್ಯಮಿ ಡಾ.ಜಿ.ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ. ಎಚ್‌‌.ಎಸ್‌ ಬಲ್ಲಾಳ್ ಸುವರ್ಣ ಉಡುಗೊರೆ ವಿತರಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಲಾರಂಗದ ಉಪಾಧ್ಯಕ್ಷ ಎಸ್.ವಿ. ಭಟ್, ಜೊತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ, ಕೋಶಾಧಿಕಾರಿ ಸದಾಶಿವ ರಾವ್ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article