
ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿ ನೆಲೆಯಾದ ಅರ್ಜುನ; ಅರ್ಜುನ ಆನೆಯ ಸ್ಮಾರಕ ಉದ್ಘಾಟಿಸಿದ ಸಚಿವ ಈಶ್ವರ ಖಂಡ್ರೆ
ಡಿ.ಬಿ. ಕುಪ್ಪೆ: ದಸರಾ ಜಂಬೂಸವಾರಿಯಲ್ಲಿ ಎಂಟು ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯ ಸ್ಮಾರಕವನ್ನು ಡಿ.ಬಿ. ಕುಪ್ಪೆ ಬಳ್ಳೆ ಶಿಬಿರದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಅರ್ಜುನ ಭೌತಿಕವಾಗಿ ನಮ್ಮ ಜೊತೆ ಇಲ್ಲದಿದ್ದರೂ, ಅವನು ಮಾಡಿದ ಸಾಹಸ, ತೀವ್ರ ಕಾರ್ಯಾಚರಣೆಗಳಲ್ಲಿ ತೋರಿದ ಧೈರ್ಯ, ಹಾಗೂ ದಸರಾ ಉತ್ಸವದಲ್ಲಿ ಹೊತ್ತಿರುವ ಚಿನ್ನದ ಅಂಬಾರಿಯ ಹೊನಲು ಎಲ್ಲವೂ ಜನಮನದಲ್ಲಿ ಸದಾ ಜೀವಂತವಾಗಿರಲಿದೆ ಎಂದರು.
“ಅರ್ಜುನನ ಶೌರ್ಯ, ಧೈರ್ಯ ಮತ್ತು ಸೇವೆ ನೆನಪಿನಲ್ಲಿ ಉಳಿಯಬೇಕು ಎಂಬ ಉದ್ದೇಶದಿಂದ ಈ ಸ್ಮಾರಕ ನಿರ್ಮಿಸಲಾಗಿದೆ. ಅವನು ಕನ್ನಡಿಗರ ಹೃದಯದಲ್ಲಿ ಸದಾ ಜೀವಂತನಾಗಿರುವ ಶಕ್ತಿಶಾಲಿ ಆನೆ” ಎಂದವರು ಹೇಳಿದರು.
5600 ಕೆ.ಜಿ. ತೂಕದ, 750 ಕೆ.ಜಿ. ಚಿನ್ನದ ಅಂಬಾರಿಯನ್ನು ಎಳೆಯುವ ಶಕ್ತಿ ಹೊಂದಿದ್ದ ಅರ್ಜುನ, ಮದಗಜ ಸೆರೆ ಕಾರ್ಯಾಚರಣೆ ವೇಳೆ ತನ್ನ ಪ್ರಾಣ ಬಲಿದಾನ ಮಾಡಿ ಅನೇಕ ಮಾವುತರು ಮತ್ತು ಅರಣ್ಯ ಸಿಬ್ಬಂದಿಯ ಜೀವ ಉಳಿಸಿದ. ಅವನನ್ನು ನಾವು ‘ಕ್ಯಾಪ್ಟನ್’ ಎಂದು ಕರೆಯುತ್ತಿದ್ದೆವು ಎಂದರು.
ಯಸಳೂರಿನ ದಬ್ಬಳ್ಳಿಕಟ್ಟೆಯಲ್ಲಿ ಸಮಾಧಿ ಮಾಡಿದ ಅರ್ಜುನನ ನೆನಪಿಗಾಗಿ ಈಗ ಬಳ್ಳೆ ಶಿಬಿರದಲ್ಲಿ 650 ಕೆ.ಜಿ ತೂಕದ, 2.98 ಮೀ ಎತ್ತರದ, 3.74 ಮೀ ಉದ್ದದ ಸ್ಮಾರಕವನ್ನು ಕಲಾವಿದ ಧನಂಜಯ ಅವರು ಕಬ್ಬಿಣದ ಮೂಲಕ ಅದ್ಭುತವಾಗಿ ನಿರ್ಮಿಸಿದ್ದಾರೆ. ಈ ಸ್ಮಾರಕ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಾ, ಅರ್ಜುನನ ಸಾಹಸ ಹಾಗೂ ದಸರಾ ಮಹೋತ್ಸವದ ಅಪರೂಪದ ಕ್ಷಣಗಳ ನೋಟವನ್ನು ಸಾರ್ವಜನಿಕರಿಗೆ ತಲುಪಿಸಲಿದೆ.
650 ಕೆ.ಜಿ ತೂಕದ ಈ ಕಬ್ಬಿಣದ ಸ್ಮಾರಕವನ್ನು ಕಲಾವಿದ ಧನಂಜಯ ನಿರ್ಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಚಿಕ್ಕಮಾದು, ಸಿಸಿಎಫ್ ಮಾಲತಿ, ಡಿಸಿಎಫ್ ಸೀಮಾ ಮತ್ತಿತರರು ಹಾಜರಿದ್ದರು.