
ದೇವನಹಳ್ಳಿ ರೈತರ ಹೋರಾಟ; ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ನಟ ಪ್ರಕಾಶ್ ರಾಜ್: ಜುಲೈ 4ಕ್ಕೆ ದೇವನಹಳ್ಳಿ ರೈತರ ಜೊತೆ ಸಿದ್ದರಾಮಯ್ಯ ಸಭೆ
ಬೆಂಗಳೂರು : ಇಲ್ಲಿನ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ರೈತರ ಹೋರಾಟವನ್ನು ಬೆಂಬಲಿಸಿ ನಟ ಪ್ರಕಾಶ್ ರಾಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
13 ಹಳ್ಳಿಗಳ ರೈತರ 1,777 ಎಕರೆ ಭೂಮಿಯನ್ನು ಯಾವುದೆ ಕಾರಣಕ್ಕೂ ಕೆಐಎಡಿಬಿ ಮೂಲಕ ಕಾರ್ಪೊರೇಟ್ ಕಂಪನಿಗಳಿಗೆ ನೀಡಬಾರದು. ಸರಕಾರ ಏಕಪಕ್ಷೀಯ ನಿರ್ಧಾರ ಸರಿಯಲ್ಲ. ರೈತರು ಹಾಗೂ ಹೋರಾಟಗಾರರ ಬಂಧನ ಖಂಡನೀಯ. ರೈತರ ಭೂಮಿಯನ್ನು ಕಸಿದುಕೊಳ್ಳಬೇಡಿ ಎಂದು ಪ್ರಕಾಶ್ ರಾಜ್ ಮನವಿ ಮಾಡಿಕೊಂಡರು.
ಜುಲೈ 4 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೇವನಹಳ್ಳಿ ಚನ್ನರಾಯಪಟ್ಟಣ ರೈತ ಹೋರಾಟಗಾರರು ಮತ್ತು ಸಂಯುಕ್ತ ಹೋರಾಟ ವೇದಿಕೆ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ.
ಇಂದು ಕಾವೇರಿ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ರೈತ ಮುಖಂಡರ ಜೊತೆ ಈ ಬಗ್ಗೆ ಚರ್ಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜುಲೈ 4ರ ಬೆಳಗ್ಗೆ 11 ಗಂಟೆಗೆ ರೈತರ ಬೇಡಿಕೆ ಮತ್ತು ಸಮಸ್ಯೆ ಕುರಿತಾಗಿ ಸಮಗ್ರ ಸಭೆ ನಡೆಸುವುದಾಗಿ ತಿಳಿಸಿದರು.
ಈ ವೇಳೆ ಸಂಯುಕ್ತ ಹೋರಾಟ ಸಮಿತಿಯ ಮುಖಂಡರಾದ ವೀರಸಂಗಯ್ಯ, ವಿಜಯಮ್ಮ ಕೆ.ಎಸ್. ವಿಮಲಾ, ಸಿರಿಮನೆ ನಾಗರಾಜ್, ತಾರಾ, ಸುಷ್ಮಾ ಮತ್ತಿತರರು ಹಾಜರಿದ್ದರು.
"ಫೈನಲ್ ನೋಟಿಫೀಕೇಷನ್ ಆಗಿದೆ. ಡಿನೋಟಿಫಿಕೇಷನ್ ಹೊರಡಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ. ಮುಖ್ಯಮಂತ್ರಿಗಳು ನಮ್ಮ ಮಾತನ್ನು ಸಹಾನುಭೂತಿಯಿಂದ ಕೇಳಿಸಿಕೊಂಡಿದ್ದಾರೆ. ಜನರ ಹೋರಾಟಕ್ಕೆ ಸ್ಪಂದಿಸುವುದು ಮುಖ್ಯ. ಜುಲೈ 4ರ ವರೆಗೂ ಹೋರಾಟ ಮುಂದುವರೆಸ್ತೀವಿ. 13 ಹಳ್ಳಿಗಳಲ್ಲಿ ಕುಟುಂಬದ ಜನರು ಸರಕಾರದ ಮುಂದೆ ಕೈಚಾಚಲ್ಲ. ಕೈಗಾರಿಕೆಗಳಿಂದ ಏನಾಗಿದೆ ಎಂಬುದು ನಮಗೆ ತಿಳಿದಿದೆ ಎಂದು ಈ ವೇಳೆ ಪ್ರಕಾಶ್ ರಾಜ್ ಹೇಳಿದರು.