
ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್ಐಎ ತನಿಖೆಗೆ ನೀಡಿದ ಕೇಂದ್ರ ಗೃಹ ಸಚಿವಾಲಯ
ಮಂಗಳೂರು: ಮೇನಲ್ಲಿ ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ತನಿಖೆಗೆ ವಹಿಸಿ ಕೇಂದ್ರ ಗೃಹ ಸಚಿವಾಲಯ ಶನಿವಾರ ಆದೇಶ ಹೊರಡಿಸಿದೆ.
ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಪದವು ಕ್ರಾಸ್ ಬಳಿ ಮೇ 1ರಂದು ರಾತ್ರಿ ದುಷ್ಕರ್ಮಿಗಳ ತಂಡ ವೊಂದು ಸುಹಾಸ್ ಶೆಟ್ಟಿಯ ಕಾರನ್ನು ಅಡ್ಡಗಟ್ಟಿ ನಡುರಸ್ತೆಯಲ್ಲೇ ಮಾರಕಾಯುಧಗಳಿಂದ ಕೊಚ್ಚಿ ಹಾಕಿ ಪರಾರಿಯಾಗಿತ್ತು. ಗಂಭೀರ ಗಾಯಗೊಂಡಿದ್ದ ಸುಹಾಸ್ ಶೆಟ್ಟಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದನು.
ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿ ಕಾರಣ ವಾಗಿದ್ದ ಈ ಪ್ರಕರಣದ ತನಿಖೆ ನಡೆಸಿದ ಬಜ್ಪೆ ಪೊಲೀಸರು ಮತ್ತು ಸಿಸಿಬಿ ಪೊಲೀಸರು ಆರೋಪಿ ಸಫ್ವಾನ್ ಸೇರಿದಂತೆ 12 ಮಂದಿ ಆರೋಪಿಗಳನ್ನು ಬಂಧಿಸಿದ್ದರು.
ಬಳಿಕ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ಐಎಗೆ ವಹಿಸುವಂತೆ ಬಿಜೆಪಿ , ಸಂಘಪರಿವಾರದ ಸಂಘಟನೆಗಳು ಆಗ್ರಹಿಸಿತ್ತು. ರಾಜ್ಯಪಾಲರಿಗೂ ಬಿಜೆಪಿ ಮನವಿ ಮಾಡಿತ್ತು.
ಅಲ್ಲದೆ ಬಜ್ಪೆಯಲ್ಲಿ ಎನ್ಐಎಗೆ ಒಪ್ಪಿಸುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿ ಜನಾಗ್ರಹ ಸಮಾವೇಶ ನಡೆದಿತ್ತು . ಪೊಲೀಸರ ಅನುಮತಿ ಪಡೆಯದೆ ಈ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಭಾಷಣಕಾರರ ಮತ್ತು ಆಯೋಜಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಹತ್ಯೆ ನಡೆದು ತಿಂಗಳಾಗುವ ಮೊದಲೇ ಮೇ 27ರಂದು ಕೊಳತ್ತಮಜಲಿನ ಅಮಾಯಕ ಯುವಕ ಪಿಕ್ ಅಪ್ ಚಾಲಕ ಅಬ್ದುಲ್ ರಹ್ಮಾನ್ ಅವರನ್ನು ಹತ್ಯೆ ಮಾಡಲಾಗಿತ್ತು. ಇವರೊಂದಿಗೆ ಇದ್ದ ಖಲಂದರ್ ಶಾಫಿ ಮೇಲೆ ಇದೇ ವೇಳೆ ಮಾರಣಾಂತಿಕ ಹಲ್ಲೆ ನಡೆದಿದ್ದರೂ, ಅವರು ಆಸ್ಪತ್ರೆ ಸೇರಿ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ ಮುಂದುವರಿದಿರುವಾಗಲೇ ಇದೀಗ ಈ ಪ್ರಕರಣ ಎನ್ಐಎಗೆ ಹಸ್ತಾಂತರಿಸಲು ಕೇಂದ್ರ ಗೃಹ ಸಚಿವಾಲಯದಿಂದ ಆದೇಶವಾಗಿದೆ.
ಸುಹಾಸ್ ಕೊಲೆ ವಿಚಾರಕ್ಕೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆ 2023 ರ ಕಲಂ 189(4), 191(2), 191(3), 126(2), 109, 118(1), 103(1), 61(1), 62, 351(2), 351(3), 190 ಮತ್ತು ಶಸ್ತ್ರಾಸ್ತ್ರ ಕಾಯಿದೆ 1959ರ 3(1) 25ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುವುದು ಕೇಂದ್ರ ಸರಕಾರಕ್ಕೆ ಮಾಹಿತಿ ಲಭಿಸಿದೆ.
ಮೇ 1ರಂದು ಸುಹಾಸ್ ಶೆಟ್ಟಿ ಕಾರಿನಲ್ಲಿ ಇನ್ನಿತರ ವ್ಯಕ್ತಿಗಳೊಂದಿಗೆ ಪ್ರಯಾಣಿಸುತ್ತಿದ್ದಾಗ ಸಫ್ವಾನ್ ಮತ್ತು ಇತರ ಎಂಟು ಮಂದಿ ಇವರ ಮೇಲೆ ದಾಳಿ ನಡೆಸಿದ್ದರು. ಇದೊಂದು ಸಾರ್ವಜನಿಕ ಸ್ಥಳದಲ್ಲಿ ಭಯವನ್ನು ಉಂಟುಮಾಡುವ ಉದ್ದೇಶದಿಂದ ವ್ಯಕ್ತಿಯೊಬ್ಬರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿದ ಪ್ರಕರಣವಾಗಿದೆ ಹಾಗೂ ಅಕ್ರಮ ಚಟುವಟಿಕೆ ತಡೆ ಕಾಯಿದೆ (ಯುಎಪಿ) 1967ರ ಕಲಂ 10 ಜೊತೆಗೆ 41, 13, 15, 17, 18 ಮತ್ತು 20 ಅನ್ವಯವಾಗುತ್ತವೆ. ಆರೋಪಿಗಳು ಪಿಎಫ್ಐ ಎಂಬ ಕಾನೂನುಬಾಹ್ಯ ಸಂಘಟನೆಯ ಸದಸ್ಯರಾಗಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ.
ಈ ಪ್ರಕರಣವು ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯಿದೆ 2008ರ ಅಡಿಯಲ್ಲಿ ಅನುಸೂಚಿತ ಅಪರಾಧ ವಾಗಿದೆ ಎಂಬ ಅಭಿಪ್ರಾಯವನ್ನು ಕೇಂದ್ರ ಸರಕಾರ ವ್ಯಕ್ತಪಡಿಸಿದೆ. ಪ್ರಕರಣದ ತೀವ್ರತೆ, ರಾಷ್ಟ್ರೀಯ ಪರಿಣಾಮಗಳು ಹಾಗೂ ವಿಸ್ತೃತವಾಗಿ ನಡೆಯುತ್ತಿರುವ ಸಂಚನ್ನು ಅನಾವರಣಗೊಳಿಸುವ ಅಗತ್ಯತೆ ಇದೆ ಎಂಬ ಕಾರಣದಿಂದಾಗಿ, ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ತನಿಖೆ ವಹಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆಯ ಸಿಟಿಸಿಆರ್ ವಿಭಾಗದ ಅಧೀನ ಕಾರ್ಯದರ್ಶಿ ರಾಜೀವ್ ಕುಮಾರ್ ಅವರು ನೀಡಿರುವ ಆದೇಶದಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯಿದೆ, 2008ರ ಸೆಕ್ಷನ್ 6 ಉಪವಿಭಾಗ (5) ಮತ್ತು ಸೆಕ್ಷನ್ 8ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಬಳಸಿ, ಮೇಲ್ಕಂಡ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕೈಗೆತ್ತಿಕೊಳ್ಳಬೇಕೆಂದು ಕೇಂದ್ರ ಸರಕಾರ ನಿರ್ದೇಶನ ನೀಡಿದೆ ಎಂದು ಗೃಹ ಇಲಾಖೆ ಆದೇಶದಲ್ಲಿ ತಿಳಿಸಿದೆ.