ಜ.3ರಂದು ದೃಶಾ ಕೊಡಗು ಅವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ
ಉಡುಪಿ: ಜೇಸಿಐ ಉಡುಪಿ ಸಿಟಿ, ವನಸುಮ ಟ್ರಸ್ಟ್ ಮತ್ತು ವನಸುಮ ವೇದಿಕೆ ಸಹಯೋಗದಲ್ಲಿ ಜ. 3ರಂದು ಸಂಜೆ 5.30ಕ್ಕೆ ಉಡುಪಿಯ ಶಾರದಾ ಇಂಟರ್ನ್ಯಾಶನಲ್ ಹೋಟೆಲ್ ಸಭಾಂಗಣದಲ್ಲಿ "ರಿವಾರ್ಡ್ ಟು ಅವಾರ್ಡ್" ದೃಶಾ ಕೊಡಗು ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕ ಬಾಸುಮ ಕೊಡಗು ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 'ಹಿಂಸೆ ನಿಲ್ಲಿಸಿ' ಎಂಬ ಘೋಷವಾಖ್ಯದೊಂದಿಗೆ ಮೂರು ರಾಜ್ಯಗಳಲ್ಲಿ ಮೂರು ಸಾವಿರ ಕಿಲೋಮೀಟರ್ ಜಾಗೃತಿ ಬೈಕ್ ರಾಲಿ ಮಾಡಿದ ದೃಶಾ ಕೊಡಗು ಅವರ ಸಾಧನೆ ಇತ್ತೀಚೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಸ್ ಬುಕ್ ಆಫ್ ರೆಕಾರ್ಡ್ಸ್ ಎರಡು ಜಾಗತಿಕ ದಾಖಲೆಗಳಿಗೆ ಸೇರ್ಪಡೆಗೊಂಡಿತು. ಈ ನಿಟ್ಟಿನಲ್ಲಿ ಈ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಉದ್ಯಮಿ ರಂಜನ್ ಕಲ್ಕೂರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ 9 ವಿಶ್ವದಾಖಲೆ ಮಾಡಿದ ಮಂಗಳೂರಿನ ಆದಿ ಸ್ವರೂಪ ಮತ್ತು ದೃಶಾ ಕೊಡಗು ಸಹಪ್ರಯಾಣಿಗ ಉಜ್ವಲ್ ಕಾಮತ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೇಸಿಐ ಉಡುಪಿ ಸಿಟಿ ಘಟಕಾಧ್ಯಕ್ಷೆ ಪಲ್ಲವಿ ಕೊಡಗು, ವನಸುಮ ವೇದಿಕೆ ಅಧ್ಯಕ್ಷ ವಿನಯ್ ಆಚಾರ್ಯ ಮುಂಡೂರು, ವಿಶ್ವದಾಖಲೆ ಮಾಡಿದ ದೃಶಾ ಕೊಡಗು ಉಪಸ್ಥಿತರಿದ್ದರು.