ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಗೃಹಿಣಿಗೆ ತಿಂಗಳಿಗೆ 2,000 ರೂ. ಸಹಾಯಧನದ 'ಗೃಹಲಕ್ಷ್ಮಿ' ಯೋಜನೆ ಪ್ರಕಟಿಸಿದ ಕಾಂಗ್ರೆಸ್



ಬೆಂಗಳೂರು(Headlines Kannada): ಮುಂದಿನ ಚುಣಾವಣೆಗಾಗಿ ರಾಜಕೀಯ ಪಕ್ಷಗಳು ತಮ್ಮ ಕಸರತ್ತನ್ನು ಮುಂದುವರಿಸಿರುವ ಮಧ್ಯೆ ಸೋಮವಾರ ಕರ್ನಾಟಕಕ್ಕೆ AICC ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಎಂಟ್ರಿ ಕೊಟ್ಟಿದ್ದಾರೆ.

ರಾಜ್ಯದ ಪ್ರತಿ ಕುಟುಂಬದ ಓರ್ವ ಗೃಹಿಣಿಗೆ ಪ್ರತಿ ತಿಂಗಳು 2,000 ರೂ. ಸಹಾಯಧನ ನೀಡುವ 'ಗೃಹಲಕ್ಷ್ಮಿ' ಯೋಜನೆಯನ್ನು ಕಾಂಗ್ರೆಸ್ ಸೋಮವಾರ ಪ್ರಕಟಿಸಿದೆ. ಬೆಂಗಳೂರಿನ ಅರಮನೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ 'ನಾ ನಾಯಕಿ' ಸಮಾವೇಶದಲ್ಲಿ AICC ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಈ ಯೋಜನೆಗೆ ಸಂಬಂಧಿಸಿದ ಭಿತ್ತ ಪತ್ರ ಅನಾವರಣಗೊಳಿಸಿದರು. 

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರಕ್ಕೇರಿದರೆ ರಾಜ್ಯದ ಪ್ರತಿ ಕುಟುಂಬದ ಯಜಮಾನಿಗೆ ತಿಂಗಳಿಗೆ ರೂ. 2,000 ನೀಡಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ತಿಳಿಸಿದ್ದಾರೆ.

ರಾಜ್ಯದ ಪ್ರತೀ ಮಹಿಳೆಯರೇ ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ಖಾಲಿಯಾಗಿದೆ ಎಂಬ ಚಿಂತೆ ಬಿಡಿ. ನಿಮ್ಮ ಮನೆಯ ಸಿಲಿಂಡರ್ ತುಂಬಿಸುವುದು ಇನ್ಮುಂದೆ ಕಾಂಗ್ರೆಸ್ ಹೊಣೆ ಎಂದು ರಾಜ್ಯ ಕಾಂಗ್ರೆಸ್ ಸೋಮವಾರ ಟ್ವೀಟ್ ಮಾಡಿದೆ.