ನಟ ಕಿಚ್ಚ ಸುದೀಪ್'ಗೆ ಆಫರ್; ನಟಿ ರಮ್ಯಾ ಮೂಲಕ ರಾಜಕೀಯಕ್ಕೆ ಕರೆತರಲು ಮುಂದಾಗಿರುವ ಕಾಂಗ್ರೆಸ್ !

ಬೆಂಗಳೂರು: ರಾಜ್ಯದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಗೆ ಎಲ್ಲ ಪಕ್ಷಗಳು ಭರದ ಸಿದ್ಧತೆ ನಡೆಸುತ್ತಿರುವ ಮಧ್ಯೆ ಕನ್ನಡ ಚಿತ್ರರಂಗದ ಖ್ಯಾತ ನಟನೊಬ್ಬನನ್ನು ತನ್ನ ಪಕ್ಷಕ್ಕೆ ಕರೆತರಲು ಕಾಂಗ್ರೆಸ್ ಮುಂದಾಗಿದೆ.

ಕನ್ನಡದ ನಟ ಬೇರೆ ಯಾರೂ ಅಲ್ಲ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಕಿಚ್ಚ ಸುದೀಪ್‌ ಅವರನ್ನು ಕಾಂಗ್ರೆಸ್‌ಗೆ ಕರೆತಂದು ಕಣಕ್ಕಿಳಿಸುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ.

ಬಿಜೆಪಿಯ ಆಡಳಿತದ ವಿರುದ್ಧ ಜನ ಅಸಮಾಧಾನಗೊಂಡಿರುವ ಬೆನ್ನಲ್ಲೇ ಕಾಂಗ್ರೆಸ್, ಸುದೀಪ್ ಅವರನ್ನು ಪಕ್ಷಕ್ಕೆ ಕರೆತಂದರೆ ಪಕ್ಷ ಇನ್ನಷ್ಟು ಬಲಗೊಳ್ಳಲಿದೆ ಎಂಬುದು ವಿಶ್ವಾಸ. 

ಸುದೀಪ್ ಅವರನ್ನು ಕಾಂಗ್ರೆಸ್'ಗೆ ಕರೆತರಲು ಕಾಂಗ್ರೆಸ್ ನಾಯಕಿ, ನಟಿ ರಮ್ಯಾ ಅವರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈವರಗೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬ್ಯುಸಿ ಆಗಿದ್ದ ಸುದೀಪ್ ಜೊತೆ ರಮ್ಯಾ ಮಾತುಕತೆ ನಡೆಸಿದ್ದು, ಸುದೀಪ್ ತೀರ್ಮಾನಕ್ಕೆ ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಕನ್ನಡ ಹಾಗು ಇತರ ಭಾಷೆಗಳ ಬಹುಭಾಷಾ ನಟರಾಗಿರುವ ಸುದೀಪ್‌, ವಾಲ್ಮೀಕಿ ಸಮುದಾಯಕ್ಕೆ ಸೇರಿದವರು ಎಂಬುದನ್ನೂ ಕಾಂಗ್ರೆಸ್‌ ಗಂಭೀರವಾಗಿ ಪರಿಗಣಿಸಿದೆ. ಸುದೀಪ್ ಬಂದರೆ ಒಂದೆಡೆ ಅವರ ಜನಪ್ರಿಯತೆ ಜೊತೆಗೆ ವಾಲ್ಮೀಕಿ ಸಮುದಾಯದ ಮತಗಳನ್ನು ಕಾಂಗ್ರೆಸ್ ತನ್ನೆ ತೆಕ್ಕೆಗೆ ತೆಗೆದುಕೊಳ್ಳುವ ಲೆಕ್ಕಾಚಾರವಿದೆ.