ಹಾವೇರಿಯ ರಟ್ಟಿಹಳ್ಳಿಯಲ್ಲಿ ಮಸೀದಿ, ಮನೆ, ಅಂಗಡಿಗಳ ಮೇಲೆ ಸಂಘಪರಿವಾರದ ಕಾರ್ಯಕರ್ತರಿಂದ ಕಲ್ಲುತೂರಾಟ; 15 ಮಂದಿ ವಶಕ್ಕೆ; ಎಸ್​​ಪಿ ಶಿವಕುಮಾರ್ ಗುಣಾರ್ ಹೇಳಿದ್ದೇನು..?

ಹಾವೇರಿ: ಮಸೀದಿ, ಮನೆ, ಅಂಗಡಿಗಳ ಮೇಲೆ ಸಂಘಪರಿವಾರದ ಕಾರ್ಯಕರ್ತರು ಕಲ್ಲುತೂರಾಟ ಮಾಡಿದ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ಮಂಗಳವಾರ ನಡೆದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು 15 ಮಂದಿಯನ್ನು ವಶಕ್ಕೆ ಪಡೆದಿದ್ದು, ಹೈ ಆಲರ್ಟ್ ಘೋಷಿಸಿದ್ದಾರೆ.

ಕೆಲದಿನಗಳ ಹಿಂದೆ ಸಂಗೊಳ್ಳಿರಾಯಣ್ಣ ಪ್ರತಿಮೆ ಲೋಕಾರ್ಪಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಮೆರವಣಿಗೆಯ ವೇಳೆ ಸಣ್ಣ ಗಲಾಟೆಯೊಂದು ನಡೆದಿತ್ತು. ಇಂದು ಸಂಘಪರಿವಾರದ ಕಾರ್ಯಕರ್ತರು ಬೃಹತ್ ರಾಲಿಯಲ್ಲಿ ಮುಸ್ಲಿಮರ ಮನೆ, ವಾಹನಗಳ ಮೇಲೂ ಕಲ್ಲುತೂರಾಟ ಮಾಡಲಾಗಿದೆ. 

ಸಂಘಪರಿವಾರದ ಕಾರ್ಯಕರ್ತರು ಮಸೀದಿ, ಮನೆ, ಅಂಗಡಿಗಳ ಮೇಲೆ ಕಲ್ಲು ತೂರಾಟ ಮಾಡಿದ್ದಲ್ಲದೆ, ಐ20 ಕಾರು, ಓಮ್ನಿ ಕಾರಿನ ಗ್ಲಾಸ್​​​ ಒಡೆದು ಗಲಾಟೆ ಎಬ್ಬಿಸಿದ್ದಾರೆ. ಇದೆ ವೇಳೆ ರಟ್ಟಿಹಳ್ಳಿ ಪಟ್ಟಣದ ಕೆಲವು ಉರ್ದು ಶಾಲೆಗಳ ಮೇಲೂ ಕಲ್ಲು ತೂರಾಟ ನಡೆದಿದೆ. ಕಲ್ಲು ತೂರಾಟದಿಂದ ಆಘಾತಕ್ಕೊಳಗಾಗಿರುವ ಶಾಲಾ ವಿದ್ಯಾರ್ಥಿಗಳು ಶಾಲೆಯಿಂದ ಹೊರಬಂದು ಕಣ್ಣೀರಿತ್ತಿದ್ದಾರೆ. ಇದೇ ವೇಳೆ ಮುಸ್ಲಿಂ ಆಟೋ ಚಾಲಕರೊಬ್ಬರನ್ನು ಸಂಘಪರಿವಾರದ ಕಾರ್ಯಕರ್ತರು ಥಳಿಸಿದ್ದು, ರಿಕ್ಷಾದ ಗಾಜು ಒಡೆದು ದಾಂದಲೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇದೀಗ ಮುಸ್ಲಿಮರು ವಾಸಿಸುವ ಪ್ರದೇಶಗಳು ಹಾಗೂ ಮಸೀದಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.

ಎಸ್​​ಪಿ ಶಿವಕುಮಾರ್ ಗುಣಾರ್ ಹೇಳಿದ್ದೇನು..?

ರಟ್ಟಿಹಳ್ಳಿ ಪಟ್ಟಣದಲ್ಲಿ ಕಲ್ಲು ತೂರಾಟ ಪ್ರಕರಣದ ಬಗ್ಗೆ ಹಾವೇರಿ ಎಸ್​​ಪಿ ಶಿವಕುಮಾರ್ ಗುಣಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿ 15 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ರಟ್ಟಿಹಳ್ಳಿ ಪಟ್ಟಣದಲ್ಲಿ ಬೈಕ್ ರಾಲಿ ನಡೆಯುತ್ತಿದ್ದಾಗ ಸಂಘಪರಿವಾರದ ಕಾರ್ಯಕರ್ತರು ಮಾರ್ಗಬಿಟ್ಟು ಕಾರಂಜಿ ಸರ್ಕಲ್​ ಬಳಿ ತೆರಳಿದ್ದು, ಈ ವೇಳೆ ಕಲ್ಲುತೂರಾಟ ನಡೆದಿದೆ. ಇದರಿಂದ 8-10 ಮನೆಗಳಿಗೆ ಹಾನಿಯಾಗಿದ್ದು, ಕಾರುಗಳು ಕೂಡಾ ಜಖಂ ಆಗಿವೆ. ಘಟನೆ ವೇಳೆ ಪೋಲಿಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟೆಗೆ ತಂದಿದ್ದು, ಪ್ರಕರಣ ಸಂಬಂಧ ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು SP ಮಾಹಿತಿ ನೀಡಿದ್ದಾರೆ.