
ಹೂಡೆ ಸಮೀಪದ ಕುಕ್ಕುಡೆ ಕುದ್ರು ನದಿಯಲ್ಲಿ ಮಗುಚಿಬಿದ್ದ ದೋಣಿ; ಒಟ್ಟು 4 ಮಂದಿ ಸಾವು; ಓರ್ವನ ಮೃತದೇಹ ನಾಪತ್ತೆ
ಉಡುಪಿ: ಹೂಡೆ ಸಮೀಪದ ಕುಕ್ಕುಡೆ ಕುದ್ರು ನದಿಯಿಂದ ಮರುವಾಯಿ ಹೆಕ್ಕಲು ಹೋಗಿದ್ದ ವೇಳೆ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ದೋಣಿಯಲ್ಲಿದ್ದ 7 ಮಂದಿಯಾಗಳ ಪೈಕಿ 4 ಮಂದಿ ಮೃತಪಟ್ಟಿದ್ದು, ಅವರಲ್ಲಿ 3 ಮಂದಿಯ ಮೃತದೇಹ ಪತ್ತೆಯಾಗಿದ್ದು, ಓರ್ವನ ಮೃತದೇಹ ನಾಪತ್ತೆಯಾಗಿರುವ ಘಟನೆ ಇಂದು ಸಂಜೆ ವರದಿಯಾಗಿದೆ.
ಮೃತರನ್ನು ಹೂಡೆಯ ಟೈಲರ್ ಫಾರೂಕ್ ಪುತ್ರ ಫೈಝಾನ್ ಹಾಗೂ ಇಬಾದ್ ಮತ್ತು ಇವರ ಸಂಬಂಧಿ ತೀರ್ಥಹಳ್ಳಿಯ ಯುವಕರು ಎಂದು ಗುರುತಿಸಲಾಗಿದೆ. ಈ ದುರ್ಘಟನೆಯಲ್ಲಿ 3 ಮಂದಿ ಯುವಕರು ಈಜಿ ಕುದ್ರು ಸೇರುವ ಮೂಲಕ ಅಪಾಯದಿಂದ ಪಾರಾಗಿದ್ದಾರೆ.
ರಂಜಾನ್ ರಜೆ ಹಿನ್ನೆಲೆಯಲ್ಲಿ ಶೃಂಗೇರಿಯ ಯುವಕರು ಹೂಡೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಅಲ್ಲಿಂದ ಒಟ್ಟು 7 ಮಂದಿ ಮರುವಾಯಿ ತೆಗೆಯಲು ಹೂಡೆಯ ಗುಡ್ಡೇರಿ ಕಂಬಳದಿಂದ ಕುಕ್ಕುಡೆ ಕುದ್ರುವಿಗೆ ದೋಣಿಯಲ್ಲಿ ತೆರಳಿದ್ದರು. ಅಲ್ಲಿ ದೋಣಿ ಮಗುಚಿ ಬಿದ್ದ ಪರಿಣಾಮ ಏಳು ಮಂದಿ ನೀರಿಗೆ ಬಿದ್ದರು. ಇದರಲ್ಲಿ ಮೂವರು ಈಜಿ ಕೊಂಡು ಕುದ್ರು ಸೇರಿಕೊಂಡಿದ್ದು ಉಳಿದ ನಾಲ್ವರು ನೀರಿನಲ್ಲಿ ಮುಳುಗಿ ನಾಪತ್ತೆಯಾದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆದಾಗ ಮೂವರ ಮೃತ ದೇಹ ಪತ್ತೆಯಾಗಿದೆ. ನಾಪತ್ತೆಯಾಗಿರುವ ಯುವಕನ ಹುಡುಕಾಟ ಮುಂದುವರೆದಿದೆ. ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಹಾಗೂ ಅಧಿಕಾರಿಗಳು ಆಗಮಿಸಿದ್ದಾರೆ.