ಉಚ್ಚಿಲ(Headlines Kannada): ದೇಶದ ಅಭಿವೃದ್ಧಿಯೇ ನಮ್ಮ ಗುರಿ ಎಂದು ಹೇಳಿಕೊಂಡು ಬಂದ ಬಿಜೆಪಿ, ಕೇಂದ್ರ ಹಾಗು ರಾಜ್ಯದಲ್ಲಿ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಇನ್ನೊಂದೆಡೆ ಬೆಲೆ ಏರಿಕೆ, ಉದ್ಯೋಗವಿಲ್ಲದೆ ಜನ ಕಂಗಾಲಾಗಿದ್ದು, ಈ ಬಾರಿ ನಮ್ಮ 'ಕೈ' ಹಿಡಿಯಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಉಚ್ಚಿಲದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಶಾಲಿನಿ ಜಿ.ಶಂಕರ್ ತೆರೆದ ಸಭಾಂಗಣದಲ್ಲಿ ಗುರುವಾರ ನಡೆದ ಮೀನುಗಾರರ ಸಮಾವೇಶ ಹಾಗು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಹುಲ್ ಗಾಂಧಿ ಮಾತನಾಡುತ್ತಿದ್ದರು.
ದೇಶದಲ್ಲಿ ಗ್ಯಾಸ್, ಡೀಸೆಲ್-ಪೆಟ್ರೋಲ್, ಅಡುಗೆ ಎಣ್ಣೆ ಬೇಗೆ ಗಗನಕ್ಕೇರಿದೆ. ಹಾಲು-ಮೋಸರ್ ಮೇಲೆಯೂ ಜಿಎಸ್ಟಿ ಹಾಕಲಾಗಿದೆ. ಬೆಲೆ ಏರಿಕೆ, ಭ್ರಷ್ಟಾಚಾರದ ನಡುವೆ ಜನಸಾಮಾನ್ಯ ಸಿಕ್ಕಿ ನರಳಾಡುತ್ತಿದ್ದಾನೆ. ದೇಶದಲ್ಲಿರುವ ಶ್ರೀಮಂತರಿಗೆ ಇದರ ಬಿಸಿ ತಾಗಿಲ್ಲ, ಬಡವರೇ ದಿನದಿಂದ ದಿನಕ್ಕೆ ಬೆಲೆ ಏರಿಕೆಯಿಂದ ಸಂಕಷ್ಟವನ್ನು ಎದುರಿಸುತ್ತಿದ್ದಾನೆ.
ಇದನ್ನೆಲ್ಲಾ ಮನಗಂಡಿರುವ ಕಾಂಗ್ರೆಸ್ ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಬಡವರಿಗಾಗಿ 4 ಗ್ಯಾರಂಟಿಗಳನ್ನು ಈಡೇರಿಸಲಿದೆ. ಅದು ಅಧಿಕಾರಕ್ಕೇರಿದ ಮೊದಲೇ ಸಂಪುಟ ಸಭೆಯಲ್ಲಿಯೇ ಈ ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು ಎಂದು ರಾಹುಲ್ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ಕೆ ಸಿ ವೇಣುಗೋಪಾಲ್, ವೀರಪ್ಪ ಮೊಯ್ಲಿ, ಬಿ.ಕೆ.ಹರಿಪ್ರಸಾದ್, ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ, ಉಡುಪಿ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್, ಪ್ರತಾಪಚಂದ್ರ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
