ಜಗದೀಶ ಶೆಟ್ಟರ್ ದಯನೀಯವಾಗಿ ಸೋಲಲಿದ್ದು, ನಾನು ರಕ್ತದಲ್ಲಿ ಬರೆದುಕೊಡುತ್ತೇನೆ: ಯಡಿಯೂರಪ್ಪ


ಹುಬ್ಬಳ್ಳಿ: ಈ ಬಾರಿಯ ಚುನಾವಣೆಯಲ್ಲಿ ‘ಹು–ಧಾ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದಲ್ಲಿ ಜಗದೀಶ ಶೆಟ್ಟರ್ ದಯನೀಯವಾಗಿ ಸೋಲಲಿದ್ದು, ಇದನ್ನು ನಾನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಬಿಜೆಪಿ ಧಾರವಾಡ ವಿಭಾಗ ಮಟ್ಟದ ಸಂಘಟನಾತ್ಮಕ ಸಭೆಯಲ್ಲಿ ಮಾತನಾಡಿರುವ ಅವರು, ಜಗದೀಶ ಶೆಟ್ಟರ್ ಬಗ್ಗೆ ವೀರಶೈವ ಲಿಂಗಾಯತರಿಗೆ ವಾಸ್ತವ ಸಂಗತಿ ತಿಳಿಯುದಕ್ಕಾಗಿಯೇ ಈ ಸಭೆಯನ್ನು ಕರೆಯಲಾಗಿದ್ದು, ಶೆಟ್ಟರ್‌ ಅವರಿಗೆ ನಾವೆಲ್ಲವನ್ನು ನೀಡಿದ್ದರೂ ಎಲ್ಲವನ್ನೂ ಮರೆತು ಪಕ್ಷ ಬಿಟ್ಟು ಹೋಗಿದ್ದಾರೆ ಎಂದರು.

ಇಂದಿನಿಂದ ಶೆಟ್ಟರ್ ಹೆಸರು ಹೇಳಲು ನಾನು ಇಷ್ಟ ಪಡುವುದಿಲ್ಲ. ಅವರು ನಂಬಿಕೆ ದ್ರೋಹಿ, ವಿಶ್ವಾಸ ದ್ರೋಹಿಯಾಗಿದ್ದು, ಅವರನ್ನು ಯಾವುದೇ ಕಾರಣಕ್ಕೂ ಕ್ಷಮಿಸಲು ಸಾಧ್ಯವಿಲ್ಲ ಎಂದ ಯಡಿಯೂರಪ್ಪ, ಪಕ್ಷಕ್ಕೆ ದ್ರೋಹ ಬಗೆಯುವವರನ್ನು ಜನ ಸುಮ್ಮನೆ ಬಿಡಬಾರದು, ದಯನೀಯವಾಗಿ ಅವರನ್ನು ಸೋಲಿಸುವಂತೆ ಕರೆ ನೀಡಿದರು.