ನಾನು ಈ ಬಾರಿಯ ಚುನಾವಣೆಯಿಂದ ಹಿಂದೆ ಸರಿಯಲ್ಲ; ಸ್ಪರ್ಧಿಸಿಯೇ ಸಿದ್ಧ: ಬಿಜೆಪಿ ಹೈಕಮಾಂಡ್'ಗೆ ಸೆಡ್ಡುಹೊಡೆದ ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಈ ಬಾರಿಯ ಚುನಾವಣೆಯಿಂದ ಹಿಂದೆ ಸರಿಯುವಂತೆ ಹೈಕಮಾಂಡ್ ನೀಡಿದ್ದು, ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜಗದೀಶ್ ಶೆಟ್ಟರ್ ಅವರು ನಾನು ಚುನಾವಣೆಯಲ್ಲಿ ಸ್ಪರ್ಧಿಸಿಯೇ ತೀರುತ್ತೇನೆ ಎಂದು ಹೇಳಿದ್ದಾರೆ.

ಮುಂದಿನ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎಂಬುದನ್ನು ಒಪ್ಪಿಕೊಂಡ ಶೆಟ್ಟರ್, ಹೊಸ ಮುಖಗಳಿಗೆ ಅವಕಾಶ ನೀಡಿಬೇಕು, ಈ ಹಿನ್ನೆಲೆಯಲ್ಲಿ ಸರಿಯುವಂತೆ ತನಗೆ ಸೂಚನೆ ನೀಡಿದ್ದಾರೆ ಎಂದರು. 

ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಷ್ಟು ದಿನದಿಂದ ಟಿಕೆಟ್ ನೀಡುವ ಭರವಸೆ ನೀಡಿದ್ದ ಪಕ್ಷ ಇದೀಗ ದಿಢೀರ್ ಅಂತ ಬಿಜೆಪಿ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಸೂಚಿಸಿದೆ. ಇದನ್ನು 2-3 ತಿಂಗಳ ಹಿಂದೆ ನನಗೆ ಹೇಳಬೇಕಿತ್ತು. ಆದರೆ, ಇವತ್ತು ಹೇಳಿದ್ದು, ಇದು ನನಗೆ ಬಹಳ ಬೇಸರ ತರಿಸಿದೆ ಎಂದರು. 30 ವರ್ಷ ಪಕ್ಷ ಕಟ್ಟಿದವರಿಗೆ ಹೀಗೆ ಮಾಡಿದ್ದು ಯಾವ ರೀತಿಯಿಂದಲೂ ಸರಿಯಲ್ಲ. ಹಿರಿಯ ನಾಯಕರಿಗೆ ಗೌರವ ಕೊಡುವ ಕೆಲಸ ಆಗಬೇಕಿದೆ ಎಂದು ಶೆಟ್ಟರ್ ಹೇಳಿದರು.

ರಾಜಕೀಯ ಜೀವನದಲ್ಲಿ ಈವರೆಗೆ  ನನ್ನ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಬಿಜೆಪಿ ಪಕ್ಷ ನಿಷ್ಠನಾಗಿ ಕೆಲಸ ಮಾಡಿದ್ದೇನೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿಯೇ ತೀರುತ್ತೇನೆ. ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಶೆಟ್ಟರ್ ಹೇಳಿದರು.