
ನೂತನ ಸಂಸತ್ ಭವನ ಭಾರತದ 140 ಕೋಟಿ ಜನರ ಆಕಾಂಕ್ಷೆಯ ಸಂಕೇತ: ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: ನೂತನ ಸಂಸತ್ ಭವನ ಕೇವಲ ಕಟ್ಟಡವಲ್ಲ, ಇದು ಭಾರತದ 140 ಕೋಟಿ ಜನರ ಆಕಾಂಕ್ಷೆಯ ಸಂಕೇತವಾಗಿದ್ದು, ಇದು ಭಾರತದ ಸಂಕಲ್ಪ ಕುರಿತು ಜಗತ್ತಿಗೆ ಸಂದೇಶ ನೀಡುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿಯವರು, ಭಾರತವು ಮುಂದೆ ಸಾಗಿದರೆ ವಿಶ್ವವೂ ಮುಂದೆ ಹೋಗುತ್ತದೆ, ಸಂಸತ್ ಭವನವು ಭಾರತದ ವಿಕಾಸ ಹಾಗೂ ವಿಶ್ವ ವಿಕಾಸಕ್ಕೆ ಆಹ್ವಾನ ನೀಡುತ್ತದೆ ಎಂದರು.
ಹೊಸ ಮಾರ್ಗಗಳನ್ನು ಅನುಸರಿಸುವುದರಿಂದ ಮಾತ್ರ ಹೊಸ ದಾಖಲೆಗಳು ಸೃಷ್ಟಿಯಾಗುತ್ತವೆ ಎಂದು ಪ್ರಧಾನಿ ಮೋದಿ ಹೇಳಿದರು. ಹೊಸ ಉತ್ಸಾಹವಿದೆ, ಹೊಸ ಪ್ರಯಾಣವಿದೆ, ಹೊಸ ಚಿಂತನೆ, ಹೊಸ ದಿಕ್ಕು, ಹೊಸ ದೃಷ್ಟಿ. ನಿರ್ಣಯ ಹೊಸದು, ನಂಬಿಕೆ ಹೊಸದು. ಈ ಕಟ್ಟಡ ಕೇವಲ ಕಟ್ಟಡವಲ್ಲ ಇದು ಭಾರತದ ಪ್ರಜಾಪ್ರಭುತ್ವದ ಪ್ರತೀಕ ಎಂದರು. ಈ ಹೊಸ ಕಟ್ಟಡ ಸ್ವಾವಲಂಬಿ ಭಾರತದ ಸೂರ್ಯೋದಯಕ್ಕೆ ಸಾಕ್ಷಿಯಾಗಲಿದೆ.
ಹಳೆಯ ಸಂಸತ್ತಿನಲ್ಲಿ ಸಮಸ್ಯೆಗಳಿದ್ದವು, ಮುಂಬರುವ ದಿನಗಳಲ್ಲಿ ಸಂಸದರ ಸಂಖ್ಯೆ ಹೆಚ್ಚಾಗಲಿದೆ. ಅದಕ್ಕಾಗಿಯೇ ಸಂಸತ್ತಿನ ಹೊಸ ಕಟ್ಟಡವನ್ನು ನಿರ್ಮಿಸುವುದು ಇಂದಿನ ಅಗತ್ಯವಾಗಿತ್ತು. ನಮ್ಮ ಪ್ರಜಾಪ್ರಭುತ್ವವೇ ನಮಗೆ ಸ್ಫೂರ್ತಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಮ್ಮ ಸಂವಿಧಾನವೇ ನಮ್ಮ ನಿರ್ಣಯ ಎಂದು ಹೇಳಿದರು.
ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬೇಕು, ಗುರಿ ದೊಡ್ಡದು ದಾರಿಯೂ ಸುಲಭವಲ್ಲ, ಪ್ರತಿಯೊಬ್ಬ ಪ್ರಜೆಯೂ ಇದಕ್ಕಾಗಿ ಶ್ರಮಿಸಬೇಕಾಗಿದೆ. ಹೊಸ ನಿರ್ಣಯಗಳನ್ನು ತೆಗೆದುಕೊಳ್ಳಬೇಕು, ಹೊಸ ವೇಗವನ್ನು ತೆಗೆದುಕೊಳ್ಳಬೇಕು. ಭಾರತೀಯರ ನಂಬಿಕೆ ಭಾರತಕ್ಕಷ್ಟೇ ಸೀಮಿತವಾಗಿಲ್ಲ ಎಂಬುದಕ್ಕೆ ಇತಿಹಾಸವೇ ಸಾಕ್ಷ ಎಂದಿರುವ ಅವರು ವೇದದ ಜತೆಗೆ ಬಸವೇಶ್ವರರ ಅನುಭವ ಮಂಟಪವನ್ನೂ ಸ್ಮರಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟ ಅನೇಕ ದೇಶಗಳಲ್ಲಿ ಹೊಸ ಪ್ರಜ್ಞೆಯನ್ನು ಜಾಗೃತಗೊಳಿಸಿತು. ಇಂದು ಪ್ರತಿಯೊಬ್ಬ ಭಾರತೀಯನೂ ಹೊಸ ಸಂಸತ್ತನ್ನು ನೋಡಿ ಹೆಮ್ಮೆ ಪಡುತ್ತಾನೆ. ಈ ಕಟ್ಟಡದಲ್ಲಿ ಕಲೆಯ ಜೊತೆಗೆ ಕೌಶಲ್ಯವೂ ಇದೆ. ಅದರಲ್ಲಿ ಸಂವಿಧಾನದ ಧ್ವನಿಯ ಜೊತೆಗೆ ಸಂಸ್ಕೃತಿಯೂ ಇದೆ. ಲೋಕಸಭೆಯ ಒಳಭಾಗವು ರಾಷ್ಟ್ರೀಯ ಪಕ್ಷಿ ನವಿಲನ್ನು ಆಧರಿಸಿದೆ.
ರಾಷ್ಟ್ರೀಯ ಪುಷ್ಪ ಕಮಲವನ್ನು ಆಧರಿಸಿದ ರಾಜ್ಯಸಭೆಯ ಒಳಭಾಗ. ಸಂಸತ್ತಿನ ಆವರಣದಲ್ಲಿ ರಾಷ್ಟ್ರೀಯ ಆಲದ ಮರವೂ ಇದೆ. ಈ ಕಟ್ಟಡದಲ್ಲಿ ನಮ್ಮ ದೇಶದ ವೈವಿಧ್ಯತೆಯನ್ನು ಸೇರಿಸಲಾಗಿದೆ. ಯುಪಿಯ ಕುಶಲಕರ್ಮಿಗಳು ರತ್ನಗಂಬಳಿಗಳನ್ನು ನೇಯ್ದಿದ್ದಾರೆ. ಈ ಕಟ್ಟಡದ ಪ್ರತಿಯೊಂದು ಕಣವೂ ಏಕ ಭಾರತ, ಶ್ರೇಷ್ಠ ಭಾರತ ಎಂಬ ಕನಸನ್ನು ಹೊಂದಿದೆ.