ಸಿದ್ದರಾಮಯ್ಯ ಸರಕಾರದ 24 ಮಂದಿ ಸಚಿವರಾಗಿ ಪ್ರಮಾಣ ವಚನ; ಮೊದಲ ಬಾರಿಗೆ 8 ಮಂದಿಗೆ ಸಚಿವ ಸ್ಥಾನದ ಭಾಗ್ಯ; ಓರ್ವರಿಗೆ ಅಚ್ಚರಿಯ ಸಂಪುಟ ಸ್ಥಾನ !

ಬೆಂಗಳೂರು : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಎರಡನೇ ಹಂತದಲ್ಲಿ ಒಟ್ಟು 24 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 

ರಾಜಭವನದ ಗಾಜಿನಮನೆಯಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ರಾಜ್ಯಪಾಲ ಥಾವರ್​ಚಂದ್​​ ಗೆಹ್ಲೋಟ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

ಇವರ ಪೈಕಿ 8 ಮಂದಿ ಮೊದಲ ಬಾರಿ ಸಚಿವರಾಗಿ ಕ್ಯಾಬಿನೆಟ್‌ಗೆ ಪ್ರವೇಶಿಸಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದ್ದು, ಖಾತೆ ಹಂಚಿಕೆ ಮಾತ್ರ ಬಾಕಿ ಉಳಿದಿದೆ.

ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ. ಅಷ್ಟೇ ಅಲ್ಲದೇ ಸಿದ್ದರಾಮಯ್ಯ ಸಂಪುಟದಲ್ಲಿರುವ ಏಕೈಕ ಮಹಿಳಾ ಸಚಿವೆ ಎಂಬ ಹೆಗ್ಗಳಿಕೆ ಕೂಡ ಇವರದ್ದಾಗಿದೆ. ಇನ್ನು, ಹೆಬ್ಬಾಳ ಶಾಸಕ ಹಾಗೂ ಸಿಎಂ ಸಿದ್ದರಾಮಯ್ಯ ಆಪ್ತ ಬೈರತಿ ಸುರೇಶ್‌ ಕೂಡ ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ. ಇದರ ಜೊತೆ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿದ್ದ ಮಾಜಿ ಸಿಎಂ ಎಸ್‌ ಬಂಗಾರಪ್ಪ ಅವರ ಪುತ್ರ, ಹಾಗೂ ಸೊರಬ ಶಾಸಕ ಮಧು ಬಂಗಾರಪ್ಪ ಅವರಿಗೂ ಕೂಡ ಮೊದಲ ಬಾರಿಗೆ ಮಂತ್ರಿ ಭಾಗ್ಯ ಒಲಿದುಬಂದಿದೆ.

ಅದರ ಜೊತೆ ಮಧುಗಿರಿ ಶಾಸಕ ಹಾಗೂ ಸಿದ್ದರಾಮಯ್ಯ ಆಪ್ತ ಕೆಎನ್‌ ರಾಜಣ್ಣ, ಮಾಜಿ ಸಚಿವ ಶ್ರೀರಾಮುಲು ಅವರನ್ನು ಭಾರೀ ಅಂತರದಿಂದ ಸೋಲಿಸಿದ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಬಿ ನಾಗೇಂದ್ರ, ಭಟ್ಕಳ ಕ್ಷೇತ್ರದ ಮಂಕಾಳ್‌ ವೈದ್ಯ ಇದೇ ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ. ಇತ್ತ ಚಿಂತಾಮಣಿ ಶಾಸಕ ಡಾ ಎಂಸಿ ಸುಧಾಕರ್‌ ಕೂಡ ಮೊದಲ ಬಾರಿ ಮಂತ್ರಿಯಾಗುತ್ತಿದ್ದು, ಇವರ ಬಾವ ಕೃಷ್ಣ ಬೈರೇಗೌಡ ಕೂಡ ಸಚಿವರಾಗಿದ್ದು, ಒಂದೇ ಸಂಪುಟದಲ್ಲಿ ಬಾವ - ಬಾಮೈದ ಮಂತ್ರಿಗಳಾಗಿದ್ದಾರೆ.

ಇನ್ನು, ಶಾಸಕರು ಅಲ್ಲದ, ವಿಧಾನ ಪರಿಷತ್‌ ಸದಸ್ಯರು ಅಲ್ಲದ ಎನ್‌ಎಸ್‌ ಬೋಸರಾಜು ಅವರು ಮೊದಲ ಬಾರಿ ಸಂಪುಟ ಪ್ರವೇಶಿಸಿರುವುದು ಅಚ್ಚರಿಗೆ ಕಾರಣವಾಗಿದೆ. ರಾಜು ಕ್ಷತ್ರೀಯ ಸಮುದಾಯಕ್ಕೆ ಸೇರಿದ ಇವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌ ಮೂಲಕ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಮುಂದೆ ನಡೆಯುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಎಂಎಲ್‌ಸಿಯಾಗಿ ಆಯ್ಕೆಯಾಗಲಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ

ಸಿದ್ದರಾಮಯ್ಯ, ಮುಖ್ಯಮಂತ್ರಿ - ವರುಣಾ

ಡಿಕೆ ಶಿವಕುಮಾರ್ - ಉಪ ಮುಖ್ಯಮಂತ್ರಿ - ಕನಕಪುರ

ಡಾ ಜಿ ಪರಮೇಶ್ವರ್ - ಕೊರಟಗೆರೆ

ರಾಮಲಿಂಗಾ ರೆಡ್ಡಿ - ಬಿಟಿಎಂ ಲೇಔಟ್

ಎಂಬಿ ಪಾಟೀಲ್ - ಬಬಲೇಶ್ವರ

ಸತೀಶ್ ಜಾರಕಿಹೊಳಿ - ಯಮಕನಮರಡಿ

ಪ್ರಿಯಾಂಕ್ ಖರ್ಗೆ - ಚಿತ್ತಾಪುರ

ಜಮೀರ್ ಅಹ್ಮದ್ ಖಾನ್ - ಚಾಮರಾಜಪೇಟೆ

ಕೆಎಚ್‌ ಮುನಿಯಪ್ಪ - ದೇವನಹಳ್ಳಿ

ಕೆಜೆ ಜಾರ್ಜ್ - ಸರ್ವಜ್ಞ ನಗರ

ಡಾ ಎಂಸಿ ಸುಧಾಕರ್ - ಚಿಂತಾಮಣಿ

ಮಂಕಾಳ ವೈದ್ಯ - ಭಟ್ಕಳ

ಈಶ್ವರ್ ಖಂಡ್ರೆ - ಭಾಲ್ಕಿ

ಲಕ್ಷ್ಮೀ ಹೆಬ್ಬಾಳ್ಕರ್ - ಬೆಳಗಾವಿ ಗ್ರಾಮೀಣ

ಮಧು ಬಂಗಾರಪ್ಪ - ಸೊರಬ

ಕೆ ವೆಂಕಟೇಶ್ - ಪಿರಿಯಾಪಟ್ಟಣ

ಡಿ ಸುಧಾಕರ್ - ಹಿರಿಯೂರು

ಎಚ್‌ಕೆ ಪಾಟೀಲ್ - ಗದಗ

ಎನ್ ಚೆಲುವರಾಯಸ್ವಾಮಿ - ನಾಗಮಂಗಲ

ಶಿವಾನಂದ ಪಾಟೀಲ್ - ಬಸವನಬಾಗೇವಾಡಿ

ಡಾ ಎಚ್‌ಸಿ ಮಹದೇವಪ್ಪ - ತಿ ನರಸೀಪುರ

ಬೈರತಿ ಸುರೇಶ್ - ಹೆಬ್ಬಾಳ

ಕೃಷ್ಣ ಭೈರೇಗೌಡ - ಬ್ಯಾಟರಾಯನಪುರ

ಕೆಎನ್‌ ರಾಜಣ್ಣ - ಮಧುಗಿರಿ

ಬಿ ನಾಗೇಂದ್ರ - ಬಳ್ಳಾರಿ ಗ್ರಾಮೀಣ

ಶರಣಬಸಪ್ಪ ದರ್ಶನಾಪುರ - ಶಹಪುರ

ಎಸ್‌ಎಸ್ ಮಲ್ಲಿಕಾರ್ಜುನ - ದಾವಣಗೆರೆ ಉತ್ತರ

ಶಿವರಾಜ ತಂಗಡಗಿ - ಕನಕಗಿರಿ

ರಹೀಂ ಖಾನ್ - ಬೀದರ್

ಸಂತೋಷ್ ಲಾಡ್ - ಕಲಘಟಗಿ

ಆರ್‌ಬಿ ತಿಮ್ಮಾಪುರ - ಮುಧೋಳ

ಡಾ ಶರಣಪ್ರಕಾಶ್ ಪಾಟೀಲ್ - ಸೇಡಂ

ದಿನೇಶ್ ಗುಂಡೂರಾವ್ - ಗಾಂಧಿನಗರ

ಎನ್‌ಎಸ್‌ ಬೋಸರಾಜು (ಆಯ್ಕೆಯಾದ ಪ್ರತಿನಿಧಿ ಅಲ್ಲ)