ಉಡುಪಿ ನಿಟ್ಟೂರು ಪೆಟ್ರೋಲ್ ಪಂಪ್ ಬಳಿ ಬೈಕ್ ಗೆ ಬಸ್ ಡಿಕ್ಕಿ; ಸವಾರ ಸ್ಥಳದಲ್ಲೇ ಮೃತ್ಯು

ಉಡುಪಿ: ಖಾಸಗಿ ಬಸ್ ವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಡುಪಿ ನಿಟ್ಟೂರು ಪೆಟ್ರೋಲ್ ಪಂಪ್ ಬಳಿ ಇಂದು ಸಂಜೆ ನಡೆದಿದೆ. 

ಮೃತರನ್ನು ಬಸಪ್ಪ(30) ಎಂದು ಗುರುತಿಸಲಾಗಿದೆ. ಈತ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನವನಾಗಿದ್ದು, ಕೆಲಸ ಮುಗಿಸಿ ಮನೆಗೆ ಹೋಗುವ ವೇಳೆ ಈ ದುರ್ಘಟನೆ ನಡೆದಿದೆ.

ಉಡುಪಿಯಿಂದ ಬ್ರಹ್ಮಾವರ ಕಡೆ ಹೋಗುತ್ತಿದ್ದ ಖಾಸಗಿ ಬಸ್, ಎದುರಿನಲ್ಲಿ ಹೋಗುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದ ಬೈಕ್ ಸವಾರನ ಮೇಲೆ ಬಸ್ ಚಕ್ರ ಹರಿದಿದ್ದು, ಇದರಿಂದ ಗಂಭೀರವಾಗಿ ಗಾಯ ಗೊಂಡ ಅವರು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಉಡುಪಿ ಸಂಚಾರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.