'ಮಹಾಲಕ್ಷ್ಮಿ' ಭೀಕರ ಕೊಲೆ ಪ್ರಕರಣ: ಪೊಲೀಸರ ಕೈಗೆ ಸಿಗದೆ ಆತ್ಮಹತ್ಯೆಗೆ ಶರಣಾದ ಹಂತಕ: ಡೆತ್‌ನೋಟ್'ನಲ್ಲಿ ಏನು ಬರೆದಿದ್ದಾನೆ ನೋಡಿ....

ಬೆಂಗಳೂರು: ವೈಯಾಲಿಕಾವಲ್‌ನಲ್ಲಿ ಮಹಾಲಕ್ಷ್ಮಿ ಭೀಕರ ಕೊಲೆ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದು, ಹತ್ಯೆಗೆ ಕಾರಣ ತಿಳಿಸಿ ಆತ ಬರೆದಿಟ್ಟಿರುವ ಡೆತ್‌ನೋಟ್ ಪೊಲೀಸರಿಗೆ ಸಿಕ್ಕಿದೆ.

ಕೊಲೆ ಆರೋಪಿ ಮುಕ್ತಿ ರಂಜನ್ ರಾಯ್ ಒಡಿಶಾದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಮಹಾಲಕ್ಷ್ಮಿ ಕೊಲೆಗೆ ಕಾರಣವನ್ನು ಡೆಟ್‌ನೋಟ್‌ನಲ್ಲಿ ಬರೆದಿಟ್ಟಿದ್ದ. ಡೈರಿಯಲ್ಲಿ ಡೆತ್‌ನೋಟ್ ಇರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. 

ಡೆತ್‌ನೋಟ್‌ನಲ್ಲಿ ಏನಿದೆ?

ಸೆಪ್ಟಂಬರ್ 3 ರಂದು ಪ್ರೇಯಸಿ ಮಹಾಲಕ್ಷ್ಮೀಯನ್ನು ಹತ್ಯೆ ಮಾಡಿದ್ದೇನೆ ಎಂದು ಆರೋಪಿ ಮುಕ್ತಿ ರಂಜನ್ ರಾಯ್ ಉಲ್ಲೇಖಿಸಿದ್ದಾನೆ. ಸೆ.3 ರಂದು ಆಕೆಯ ಮನೆಗೆ ಹೋದಾಗ ಕೃತ್ಯ ಎಸಗಿದ್ದೇನೆ. ವೈಯಕ್ತಿಕ ವಿಚಾರಗಳಿಗೆ ಆಕೆ ಜೊತೆ ಜಗಳವಾಯಿತು. ಆಗ ಆಕೆ ಹಲ್ಲೆ ನಡೆಸಿದಳು. ಇದರಿಂದ ಕೋಪಗೊಂಡು ಆಕೆಯನ್ನು ಕೊಂದೆ. ಆ ಬಳಿಕ 59 ಪೀಸ್ ಮಾಡಿ ಫ್ರಿಡ್ಜ್ನಲ್ಲಿ ಇರಿಸಿದ್ದೆ. ಆಕೆಯ ವರ್ತನೆಯಿಂದ ಬೇಸತ್ತು ಕೃತ್ಯ ಎಸಗಿದ್ದೇನೆ.

ಕೊಲೆ ನಡೆದಿದ್ದು ಹೇಗೆ?

ಮೊದಲು ಮಹಾಲಕ್ಷ್ಮಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಆಕೆಯನ್ನ ಆ್ಯಕ್ಸಲ್ ಬ್ಲೇಡ್‌ನಿಂದ ಕತ್ತರಿಸಿದ್ದಾನೆ. ಬಾತ್ ರೂಂನಲ್ಲಿ ಆಕೆ ದೇಹವನ್ನ ಪೀಸ್ ಪೀಸ್ ಮಾಡಿದ್ದಾನೆ. ನಂತರ ಫ್ರಿಡ್ಜ್‌ಗೆ ಮಹಾಲಕ್ಷ್ಮಿ ಮೃತದೇಹದ 53 ಪೀಸ್‌ಗಳನ್ನು ತುಂಬಿದ್ದಾನೆ. ಸಾಕ್ಷಿ ನಾಶಪಡಿಸಲು ಬಾತ್ ರೂಂನಲ್ಲಿ ಆ್ಯಸಿಡ್ ಹಾಕಿ ಕ್ಲೀನ್ ಮಾಡಿದ್ದಾನೆ ಕೊಲೆ ಆರೋಪಿ. 

ಆರೋಪಿ ಪತ್ತೆ ಹೇಗಾಯ್ತು?

ಭೀಕರ ಕೊಲೆಯ ಪ್ರಮುಖ ಶಂಕಿತ ಆರೋಪಿಯಾಗಿದ್ದ ರಂಜನ್. ಈತನ ಮೇಲೆ ತನಿಖಾ ತಂಡಕ್ಕೆ ಹೆಚ್ಚು ಅನುಮಾನ ಇತ್ತು. ಮಹಾಲಕ್ಷ್ಮಿ ಜೊತೆ ಶೋರೂಂನಲ್ಲಿ ಸ್ಟೋರ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ. ಮಹಾಲಕ್ಷ್ಮಿ ಕೊಲೆ ದಿನವಾದ ಸೆ.3 ರಿಂದ ಈತನ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿತ್ತು. ಬೆಂಗಳೂರನ್ನೂ ಬಿಟ್ಟು ಈತ ಬೇರೆ ಕಡೆ ಎಸ್ಕೇಪ್ ಆಗಿದ್ದ. ಕಾಲ್ ಡಿಟೇಲ್ಸ್ನಲ್ಲೂ ಮಹಿಳೆ ಈತನ ಜೊತೆ ಹೆಚ್ಚು ಸಂಪರ್ಕವಿರೋದು ಗೊತ್ತಾಗಿತ್ತು. ಆದರೆ, ತನಿಖೆ ಪ್ರಾರಂಭವಾದ ವೇಳೆ ಈತನ ಸುಳಿವು ಇರಲಿಲ್ಲ. ಹೀಗಾಗಿ, ಈತನ ಫೋನ್ ಕಾಲ್ ಜಾಡು ಹಿಡಿದು ಪೊಲೀಸರ ತಂಡ ಹೊರಟಿತ್ತು. ಆದರೆ, ಪೊಲೀಸರಿಗೆ ಸಿಗುವ ಮುನ್ನವೇ ತನ್ನ ಊರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಡಿಸಾದ ಭೂನಿಪುರ ಎಂಬ ಗ್ರಾಮದಲ್ಲಿ ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆ ಬಗ್ಗೆ ದುಸೂರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.