ಉಚ್ಚಿಲ: ದ.ಕ. ಮೊಗವೀರ ಮಹಾಜನ ಸಂಘದ ಅಧೀನದಲ್ಲಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ 'ಉಡುಪಿ-ಉಚ್ಚಿಲ ದಸರಾ'ದಲ್ಲಿ ದಿನಪೂರ್ತಿ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳು ನಡೆಯುತ್ತಿದ್ದು, ಜನಜಂಗುಳಿ ಹೆಚ್ಚುತ್ತಲೇ ಇದೆ.
ರವಿವಾರ ಬೆಳಗ್ಗೆ ಕುಸ್ತಿ ಪಂದ್ಯಾಟ, ಮಧ್ಯಾಹ್ನ ಹೆಣ್ಣು ಮಕ್ಕಳ ಹುಲಿ ಕುಣಿತ ಸ್ಪರ್ಧೆ, ರಾತ್ರಿ ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಅವರಿಂದ ವಿಶೇಷ ಜಾದೂ ಪ್ರದರ್ಶನ ನಡೆಯಿತು.
ಕುದ್ರೋಳಿ ಗಣೇಶ್ ಅವರು ತಮ್ಮ ಕೈಚಳಕದ ಜಾದೂ ಮೂಲಕ ನೆರೆದವರನ್ನು ಮಂತ್ರಮುಗ್ಧರನ್ನಾಗಿಸಿದರು. ಹಾಸ್ಯ, ಮನೋರಂಜನೆಯ ಜಾದೂ ಕಂಡ ಪ್ರೇಕ್ಷಕರು ತಮ್ಮ ಕುರ್ಚಿ ಬಿಟ್ಟು ಅತ್ತಿತ್ತ ಕದಲಲಿಲ್ಲ.





