ಮಾಂಸಾಹಾರ ಸೇವಿಸದಂತೆ ಬಾಯ್​ಫ್ರೆಂಡ್ ಸಾರ್ವಜನಿಕವಾಗಿ ನಿಂದಿಸಿದ್ದಕ್ಕೆ ಏರ್ ಇಂಡಿಯಾ ಪೈಲಟ್ ಆತ್ಮಹತ್ಯೆ!


ಮುಂಬೈ: 25 ವರ್ಷದ ಏರ್ ಇಂಡಿಯಾ ಪೈಲಟ್ ಸೃಷ್ಟಿ ತುಲಿ ಅವರು ಸೋಮವಾರ ಅಂಧೇರಿಯ ಮರೋಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸೃಷ್ಟಿ ಬಾಯ್​ಫ್ರೆಂಡ್, 27 ವರ್ಷದ ಆದಿತ್ಯ ಪಂಡಿತ್‌ನನ್ನು ಪೊವೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಸೋಮವಾರ ಬೆಳಗ್ಗೆ ಅಂಧೇರಿ(ಪೂರ್ವ)ಯಲ್ಲಿರುವ ಮರೋಲ್ ಪೊಲೀಸ್ ಕ್ಯಾಂಪ್‌ನ ಹಿಂಭಾಗದ ಬಾಡಿಗೆ ನಿವಾಸದಲ್ಲಿ ತುಲಿ ಶವವಾಗಿ ಪತ್ತೆಯಾಗಿದ್ದಾಳೆ. ತನ್ನ ಬಾಯ್ ಫ್ರೆಂಡ್ ಜೊತೆಗಿನ ಜಗಳದ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಆದಿತ್ಯ ಪಂಡಿತ್ ಸೃಷ್ಟಿಯನ್ನು ಕೊಲೆ ಮಾಡಿ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗೋರಖ್‌ಪುರ ಮೂಲದ ಸೃಷ್ಟಿ ತುಲಿ ಅವರ ಕುಟುಂಬ ಆರೋಪಿಸಿದೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಆದಿತ್ಯ ಪಂಡಿತ್, ಮಾಂಸಾಹಾರಿ ಆಹಾರವನ್ನು ಸೇವಿಸದಂತೆ ಸೃಷ್ಟಿಯನ್ನು ಸಾರ್ವಜನಿಕವಾಗಿ ನಿಂದಿಸಿದ್ದಾರೆ ಎಂದು ಆಕೆಯ ಕುಟುಂಬ ಆರೋಪಿಸಿದೆ. ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುವಂತೆ ಕುಟುಂಬಸ್ಥರು ಮುಂಬೈ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಕಮರ್ಷಿಯಲ್ ಪೈಲಟ್ ಲೈಸೆನ್ಸ್‌ಗಾಗಿ ತರಬೇತಿ ಪಡೆಯುತ್ತಿರುವಾಗ ಆದಿತ್ಯ ಮತ್ತು ಸೃಷ್ಟಿ ದೆಹಲಿಯಲ್ಲಿ ಭೇಟಿಯಾಗಿದ್ದರು. ತರಬೇತಿಯ ನಂತರ, ಸೃಷ್ಟಿ ಏರ್ ಇಂಡಿಯಾದಲ್ಲಿ ಕೆಲಸಕ್ಕೆ ಸೇರಿದರು. ಆದರೆ ಆದಿತ್ಯ ಪಂಡಿತ್ ಪೈಲಟ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು.