ಹೊಸದಿಲ್ಲಿ: ದುಬೈ ಯುವರಾಜ ಹಮ್ದಾನ್ ಬಿನ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಅವರು ಮಂಗಳವಾರ ತಮ್ಮ ಮೊದಲ ಅಧಿಕೃತ ಭೇಟಿಗಾಗಿ ಹೊಸದಿಲ್ಲಿಗೆ ಆಗಮಿಸಿದ್ದು, ಪ್ರಧಾನಿ ಮೋದಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ದಿಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ದುಬೈ ಯುವರಾಜ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಅವರನ್ನು ಕೇಂದ್ರ ಪ್ರವಾಸೋದ್ಯಮ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಖಾತೆ ಸಚಿವ ಸುರೇಶ್ ಗೋಪಿ ಸ್ವಾಗತಿಸಿದರು. ಬಳಿಕ ದುಬೈ ಯುವರಾಜನಿಗೆ ವಿದ್ಯುಕ್ತವಾಗಿ ಸರಕಾರಿ ಗೌರವವನ್ನು ನೀಡಲಾಗಿದೆ. ಅವರು ಎರಡು ದಿನಗಳ ಕಾಲ ಭಾರತ ಪ್ರವಾಸದಲ್ಲಿರಲಿದ್ದಾರೆ.
ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ದುಬೈ ರಾಜಕುಮಾರನ ಭೇಟಿಯಿಂದ ಭಾರತ-ಯುಎಇ ಸಂಬಂಧದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಲಿದೆ ಎಂದು ಹೇಳಿದರು.






