'ಟೀಮ್ ಮಾರುತಿ ಮೂಳೂರು'ನಿಂದ 'ಪಿಲಿಪಜ್ಜೆ 4.0'ರ ಊದು ಪೂಜೆ ಕಾರ್ಯಕ್ರಮ; ಸಮಾಜ ಸೇವಕ ಜಲಾಲುದ್ದೀನ್-ಅಬ್ದುಲ್ ಜಲೀಲ್ ಗೆ ಸನ್ಮಾನ
ಉಚ್ಚಿಲ: ಉಡುಪಿ-ಉಚ್ಚಿಲ ದಸರಾ ಪ್ರಯುಕ್ತ ಟೀಮ್ ಮಾರುತಿ ಮೂಳೂರು ಬಳಗದಿಂದ 'ಪಿಲಿಪಜ್ಜೆ 4.0'ರ ಊದು ಪೂಜೆ ಕಾರ್ಯಕ್ರಮದಲ್ಲಿ ಇಬ್ಬರು ಸಮಾಜ ಸೇವಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶುಕ್ರವಾರ ಮೂಳೂರಿನ ಪಡು ಸರಕಾರಿ ಸಂಯುಕ್ತ ಶಾಲೆಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಉಚ್ಚಿಲದ ಸಾಮಾಜಿಕ ಕಾರ್ಯಕರ್ತ ಜಲಾಲುದ್ದೀನ್ ಜಲ್ಲು ಹಾಗು ಕಡಬದ ಅಬ್ದುಲ್ ಜಲೀಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಉಚ್ಚಿಲ, ಮೂಳೂರು, ಕಾಪು, ಪಡುಬಿದ್ರೆ ಸುತ್ತಮುತ್ತ ನಡೆಯುವ ಅಪಘಾತಗಳಲ್ಲಿ ಎಷ್ಟೋ ಜೀವಗಳನ್ನು ರಕ್ಷಿಸಿದ ಕೀರ್ತಿ ಜಲಾಲುದ್ದೀನ್ ಅವರದ್ದಾಗಿದೆ. ಸ್ಥಳೀಯವಾಗಿ ಎಲ್ಲೇ ಏನೇ ಅಪಘಾತ, ಅನಾಹುತವಾದರೂ ಸ್ಥಳಕ್ಕೆ ದೌಡಾಯಿಸಿ ಜೀವರಕ್ಷಣೆಯಲ್ಲಿ ತೊಡುಗುವ ಮೂಲಕ 24 ತಾಸು ಕೂಡಾ ಸೇವೆಗೆ ಲಭ್ಯವಿರುವ ಒಬ್ಬ ಜೀವ ರಕ್ಷಕರಾಗಿದ್ದಾರೆ ಜಲಾಲುದ್ದೀನ್. ಯಾವುದೇ ಫಲಾಪೇಕ್ಷೆಯಿಲ್ಲದೇ ತನ್ನ ಜೀವವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದು, ಅವರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಶುಕ್ರವಾರ ಟೀಮ್ ಮಾರುತಿ ಮೂಳೂರು ಬಳಗದಿಂದ ಸನ್ಮಾನಿಸಲಾಯಿತು.
ಟೀಮ್ ಮಾರುತಿ ಮೂಳೂರು ಬಳಗವು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಕಳೆದ 3 ವರ್ಷಗಳಿಂದ ಹುಲಿ ವೇಷಗಳನ್ನು ಹಾಕುವ ಮೂಲಕ ಅದರಿಂದ ಬರುವ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುವುದರೊಂದಿಗೆ ಸಾಮಾಜಿಕ ಸೇವೆಯನ್ನು ನೀಡುತ್ತಿದೆ.
ಕಾರ್ಯಕ್ರಮದಲ್ಲಿ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಶಾಸಕ ಲಾಲಾಜಿ ಮೆಂಡನ್, ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ, ಕಾಪು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಯು ಸಿ ಶೇಖಬ್ಬ, ಕಾಪು ಸಿ ಎ ಬ್ಯಾಂಕ್ ಅಧ್ಯಕ್ಷ ದಿವಾಕರ್ ಶೆಟ್ಟಿ, ನಾರಾಯಣ ಶೆಟ್ಟಿ ಎರ್ಮಾಳು, ನವೀನ್ ಚಂದ್ರ ಶೆಟ್ಟಿ, ಎಮ್ ಹೆಚ್ ಬಿ ಮೂಳೂರು, ಸುನಿಲ್ ಕುಮಾರ್ ಕಟಪಾಡಿ ಮಟ್ಟು, ಆಸಿಫ್, ಸತೀಶ್ಚಂದ್ರ, ಮೊಗವೀರ ಮುಖಂಡ ಚಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಟೀಮ್ ಮಾರುತಿ ಮೂಳೂರು ಇದರ ಅಧ್ಯಕ್ಷ ಪ್ರಹಾರ ಹಾಗು ಪದಾಧಿಕಾರಿಗಳು ಈ ವೇಳೆ ಹಾಜರಿದ್ದರು.




