ದಿನೇ ದಿನೇ ಹೆಚ್ಚುತ್ತಿದೆ ‘ಉಡುಪಿ ಉಚ್ಚಿಲ ದಸರಾ’ ವೈಭವ; ಹಲವು ಗಣ್ಯರ ಭೇಟಿ

ಉಚ್ಚಿಲ: ಇಲ್ಲಿನ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಉಡುಪಿ ಉಚ್ಚಿಲ ದಸರಾ’ದಲ್ಲಿ ಆರಂಭದಿಂದ ಪ್ರತಿನಿತ್ಯ ಹಲವು ಗಣ್ಯರು, ಜನಪ್ರತಿನಿಧಿಗಳು, ಸಿನೆಮಾ ಕಲಾವಿದರು ಭೇಟಿ ನೀಡಿ ದಸರಾದಲ್ಲಿ ಪಾಲ್ಗೊಳ್ಳುವ ಮೂಲಕ ದೇವರ ದರ್ಶನ ಪಡೆಯುತ್ತಿದ್ದಾರೆ.
ಕರಾವಳಿ ಕರ್ನಾಟಕದ ನಾಡಹಬ್ಬವೆಂದೇ ಖ್ಯಾತಿ ಪಡೆಯುತ್ತಿರುವ ‘ಉಡುಪಿ ಉಚ್ಚಿಲ ದಸರಾ’ದ ವೈಭವ ಕಾಣಲು ರಾಜ್ಯವಲ್ಲದೆ, ದೇಶ-ವಿದೇಶಗಳಿಂದಲೂ ಜನ ಬರುತ್ತಿದ್ದು, ದಾಖಲೆ ಬರೆಯುವತ್ತ ಸಾಗುತ್ತಿದೆ.
ದಸರಾ ರೂವಾರಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ.ಜಿ.ಶಂಕರ್ ಮಾರ್ಗದರ್ಶನದಲ್ಲಿ, ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ ನೇತೃತ್ವದಲ್ಲಿ ಸೆಪ್ಟೆಂಬರ್ 22ರಿಂದ ಆರಂಭವಾದ ದಸರಾ ಅಕ್ಟೋಬರ್ 2ರ ವರೆಗೆ ನಡೆಯಲಿದ್ದು, ದಿನದಿಂದ ದಿನಕ್ಕೆ ದಸರಾ ಆಕರ್ಷಣೆ ಹೆಚ್ಚುತ್ತಿದೆ.
ಈ ದಸರಾ ನೋಡಿ ಕಣ್ತುಂಬಿಸಿಕೊಳ್ಳಲು ಜನ ಸಾಗರವೇ ಹರಿದು ಬರುತ್ತಿದ್ದು, ಹಲವು ಗಣ್ಯರು, ಪ್ರತಿನಿಧಿಗಳು, ಸಿನೆಮಾ ಕಲಾವಿದರು ಕೂಡ ಭೇಟಿ ನೀಡುತ್ತಿದ್ದು, ಅವರೆಲ್ಲರನ್ನು ಕ್ಷೇತ್ರ ಆಡಳಿತ ಸಮಿತಿಯಿಂದ ಗೌರವಿಸುವ ಕಾರ್ಯ ಕೂಡ ನಡೆಯುತ್ತಿದೆ.
ಸೋಮವಾರ ದಸರಾಕ್ಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮೂಡುಬಿದಿರೆ ಆಳ್ವಾಸ್ ಎಜುಕೇಶನ್ ಟ್ರಸ್ಟ್ ನ ಮುಖ್ಯಸ್ಥ ಡಾ.ಎಂ.ಮೋಹನ ಆಳ್ವ, ಮಣಿಪಾಲ್ ಮಾಹೆ ವಿವಿ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಸೇರಿದಂತೆ ಮತ್ತಿತರ ಗಣ್ಯರು ಭೇಟಿ ನೀಡಿ, ದೇವರ ದರ್ಶನ ಪಡೆದರು. ಅವರನ್ನು ನಾಡೋಜ ಡಾ.ಜಿ.ಶಂಕರ್, ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ ಸೇರಿದಂತೆ ಮತ್ತಿತರರು ಗೌರವಿಸಿದರು.
ದಸರಾ ಆರಂಭದಿಂದ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಸಚಿವ ಕೆ.ಎಚ್.ಮುನಿಯಪ್ಪ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯರಾದ ಶರವಣ, ಪ್ರತಾಪ ಸಿಂಹ ನಾಯಕ್, ತಿಮ್ಮಣ್ಣಪ್ಪ ಕಮ್ಮಕನೂರು, ಡಿ.ಎಸ್. ಅರುಣ್, ನವೀನ್ ಕೆ.ಎಸ್., ಐವನ್ ಡಿಸೋಜ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, 'ಸು ಫ್ರಮ್ ಸೋ' ಚಿತ್ರ ತಂಡ ಸೇರಿದಂತೆ ಹಲವಾರು ಗಣ್ಯರು ಭೇಟಿ ನೀಡಿದ್ದಾರೆ.







