
ಬಹರೈನ್ ಕನ್ನಡ ಸಂಘದ 'ಯಕ್ಷ ವೈಭವ – 2025'; ಕಲಾರಸಿಕರ ಮನಗೆದ್ದ 'ಗಜೇಂದ್ರ ಮೋಕ್ಷ' - 'ಇಂದ್ರಜಿತು ಕಾಳಗ'
ಬಹರೈನ್: ಕನ್ನಡ ಸಂಘ ಬಹರೈನ್ ಇತ್ತೀಚಿಗೆ ಆಯೋಜಿಸಿದ್ದ ಸಂಘದ ವಾರ್ಷಿಕ ಯಕ್ಷಗಾನ ಕಾರ್ಯಕ್ರಮವಾದ “ಯಕ್ಷ ವೈಭವ – 2025” ಕನ್ನಡ ಭವನದ ಸಭಾಂಗಣದಲ್ಲಿ ಅದ್ದೂರಿಯಾಗಿ ಜರುಗಿ ನೆರೆದ ನೂರಾರು ಯಕ್ಷರಸಿಕರ ಮನಸೂರೆಗೊಳಿಸಿತು.
ಸಂಜೆ 5 ಗಂಟೆಗೆ ಆರಂಭವಾದ ಈ ಸಾಂಸ್ಕೃತಿಕ ಉತ್ಸವದಲ್ಲಿ “ಗಜೇಂದ್ರ ಮೋಕ್ಷ” ಹಾಗೂ “ಇಂದ್ರಜಿತು ಕಾಳಗ” ಎಂಬ ಎರಡು ಭವ್ಯ ಯಕ್ಷಗಾನ ಪ್ರಸಂಗಗಳನ್ನು ಅತಿಥಿ ಕಲಾವಿದರು ಹಾಗು ಸಂಘದ ಕಲಾವಿದರು ಅತ್ಯಂತ ಮನೋಜ್ಞವಾಗಿ ಪ್ರದರ್ಶಿಸಿದರು. ಭಕ್ತಿ, ವೀರ ಹಾಗೂ ರಸಪೂರ್ಣ ಪ್ರದರ್ಶನಕ್ಕೆ ಕಲಾರಸಿಕರಿಂದ ಭಾರೀ ಚಪ್ಪಾಳೆಯ ಸುರಿಮಳೆಯಾಯಿತು.
ಹಿಮ್ಮೇಳದಲ್ಲಿ ಶ್ರೀನಿವಾಸ ಗೌಡ ಬಳ್ಳಮಂಜ ಮತ್ತು ಮಹೇಶ್ ನಾಯಕ್ ಅಜೆಕಾರು ಭಾಗವತರಾಗಿ, ಅಕ್ಷಿತ್ ಸುವರ್ಣ ಮದ್ದಳೆಯಲ್ಲಿ, ಸವಿನಯ ನೆಲ್ಲಿತೀರ್ಥ ಚೆಂಡೆಯಲ್ಲಿ ಹಾಗೂ ದಿವ್ಯರಾಜ್ ರೈ ಚಕ್ರತಾಳದಲ್ಲಿ ತಮ್ಮ ಕಲಾಪ್ರೌಢಿಮೆಯನ್ನು ಮೆರೆದರೆ, ಮುಮ್ಮೇಳದಲ್ಲಿ ಗಜೇಂದ್ರ, ಮಕರ, ವಿಷ್ಣು, ರಾಮ, ಲಕ್ಷ್ಮಣ, ಹನುಮಂತ, ಇಂದ್ರಜಿತು, ರಾವಣ ಮುಂತಾದ ಪಾತ್ರಗಳನ್ನು ನೈಜವಾಗಿ ಅಭಿನಯಿಸಿದ ಎಲ್ಲ ಕಲಾವಿದರು ಅಭಿನಯ, ಸಂವಾದ ಹಾಗೂ ಪಾದರಸದಂತಹ ನಾಟ್ಯದಿಂದ ಎಲ್ಲರನ್ನು ಮಂತ್ರಮುಗ್ದರನ್ನಾಗಿಸಿದರು.
ಗಜೇಂದ್ರ ಮೋಕ್ಷ ಪ್ರಸಂಗದಲ್ಲಿ ಇಂದ್ರದ್ಯುಮ್ನನಾಗಿ ರಾಮ್ ಪ್ರಸಾದ್ ಅಮ್ಮೆನಡ್ಕ, ದೃಷ್ಟದ್ಯುಮ್ನನಾಗಿ ಲಕ್ಷ್ಮಣ ಶೆಟ್ಟಿ ತಾರೆಮಾರು, ಯವನಾಶ್ವನಾಗಿ ಸಂಪತ್ ಶೆಟ್ಟಿ ಬೇಲಾಡಿ, ವೀರಸೇನನಾಗಿ ಧನು ರೈ, ಹೂ ಗಂಧರ್ವನಾಗಿ ಅಕ್ಷಯ್ ಭಟ್ ಮೂಡಬಿದ್ರಿ, ಗಂಧರ್ವ ರಾಣಿಯರಾಗಿ ರೇಶ್ಮಾ ಗೋಪಾಲ್ ಶೆಟ್ಟಿ, ನಮಿತಾ ಸಾಲ್ಯಾನ್, ದೇವಲ ಮುನಿಯಾಗಿ ಪೂರ್ಣಿಮಾ ಜಗದೀಶ, ಅಗಸ್ತ್ಯ ಮುನಿಯಾಗಿ ಭಾಸ್ಕರ ಆಚಾರ್ಯ, ಗಜೇಂದ್ರನಾಗಿ ಸಚಿನ್ ಪಾಟಾಳಿ, ಮಕರನಾಗಿ ಮೋಹನ್ ಎಡನೀರು, ವಿಷ್ಣುವಾಗಿ ಕವಿತಾ ಸುರೇಶ್ ಸಿದ್ಧನಕೆರೆಯವರು ಯಕ್ಷರಸಿಕರನ್ನು ರಂಜಿಸಿದರೆ,ಇಂದ್ರಜಿತು ಕಾಳಗದಲ್ಲಿ ಶ್ರೀರಾಮನಾಗಿ ಸುರಕ್ಷಾ ಜೀವಿತ್ ಪೂಂಜ, ಮೊದಲ ಲಕ್ಷ್ಮಣನಾಗಿ ಪ್ರಕೃತಿ ಗೋಪಾಲ್ ಶೆಟ್ಟಿ, ಎರಡನೇ ಲಕ್ಷ್ಮಣನಾಗಿ ಅಕ್ಷಯ್ ಭಟ್ ಮೂಡಬಿದ್ರಿ, ವಿಭೀಷಣನಾಗಿ ರಾಜೇಶ್ ಶೆಟ್ಟಿಗಾರ್, ಸುಗ್ರೀವನಾಗಿ ಸತೀಶ್ ಕೊಲ್ಯ, ಹನುಮಂತನಾಗಿ ಜೀವಿತ್ ಪೂಂಜ, ಜಾಂಬವಂತನಾಗಿ ಸಂತೋಷ್ ಆಚಾರ್ಯ, ಕಪಿ ಸೈನ್ಯವಾಗಿ ಅಭಿಜ್ಞ ಸುರೇಶ್ ಸಿದ್ಧನಕೆರೆ, ಸನತ್ ಸಂಪತ್ ಶೆಟ್ಟಿ, ಸಹನಾ ಸಂಪತ್ ಶೆಟ್ಟಿ, ರಾವಣನಾಗಿ ರಾಜೇಶ್ ಮಾವಿನಕಟ್ಟೆ, ರಾವಣದೂತ / ಶುಕ್ರಾಚಾರ್ಯನಾಗಿ ಪ್ರವೀಣ್ ಶೆಟ್ಟಿ ಕಿನ್ನಿಗೋಳಿ, ಇಂದ್ರಜಿತುವಾಗಿ ಶೇಖರ್ ಡಿ. ಶೆಟ್ಟಿಗಾರ್, ಮಾಯಾ ಸೀತೆಯಾಗಿ ಶೋಭಾ ರಾಮ್ ಪ್ರಸಾದ್ ಅವರು ರಂಗದಲ್ಲಿ ಅತ್ಯುತ್ತಮ ಕಲಾಪ್ರದರ್ಶನ ನೀಡಿದರು.
ರಂಗಸಜ್ಜಿಕೆಯಲ್ಲಿ ರಾಜಶಂಕರ್ ಶೆಟ್ಟಿ, ಹಿತಿನ್ ಪೂಜಾರಿ, ಅಯ್ಯಪ್ಪ ಎಡನೀರು, ಪುಷ್ಪರಾಜ್ ಶೆಟ್ಟಿ, ಲಕ್ಷ್ಮೀನಾರಾಯಣ, ಪೂಜಾ ಶೆಟ್ಟಿ, ಜಗದೀಶ ಜೆಪ್ಪು, ಕರುಣಾಕರ್ ಪದ್ಮಶಾಲಿ, ಸತೀಶ್ ಮಲ್ಪೆ ಮುಂತಾದವರು ಸಹಕರಿಸಿದರೆ, ಒಟ್ಟು ಯಕ್ಷಗಾನದ ನಿರ್ದೇಶನ ದೀಪಕ್ ರಾವ್ ಪೇಜಾವರ್ ಇವರದಾಗಿತ್ತು. ನಿರ್ವಹಣೆ ಸಹಕಾರ ಮೋಹನ್ ಎಡನೀರು, ವೇಷಭೂಷಣ ಹಾಗೂ ನಿರ್ವಹಣೆ ರಾಮ್ ಪ್ರಸಾದ್ ಅಮ್ಮೆನಡ್ಕ ಅವರದ್ದಾಗಿತ್ತು.
ಯಕ್ಷಗಾನ ಪ್ರದರ್ಶನದ ಕೊನೆಯಲ್ಲಿ ನಡೆದ ಸಭೆಯಲ್ಲಿ ಅತಿಥಿ ಕಲಾವಿದರಿಗೆ ಗೌರವ ಸಮ್ಮಾನ ನೀಡಲಾಯಿತು. ಇದೇ ವೇದಿಕೆಯಲ್ಲಿ ಸಂಘದ ಹಿರಿಯ ಸದಸ್ಯ ಹಾಗೂ ಭಾಗವತರಾಗಿ ಸಂಘದ ಯಕ್ಷರಂಗಕ್ಕೆ ಅನನ್ಯ ಕೊಡುಗೆಯನ್ನು ನೀಡಿರುವ ಮಹೇಶ್ ನಾಯಕ್ ಅಜೆಕಾರು ಅವರನ್ನು ಸಮ್ಮಾನಿಸಿ, ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಅಲ್ಲದೆ ಸಂಘದ ಕಲಾವಿದರು, ಸ್ವಯಂಸೇವಕರು ಮತ್ತು ಮುಖ್ಯ ಪ್ರಾಯೋಜಕರಿಗೆ ಸ್ಮರಣಿಕೆ ನೀಡಿ ಕೃತಜ್ಞತೆ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಅಜಿತ್ ಬಂಗೇರ ಸಾಂದರ್ಭಿಕವಾಗಿ ಮಾತನಾಡಿ, ಎಲ್ಲರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಸಭಾಕಾರ್ಯಕ್ರಮದಲ್ಲಿ ಸುಭಾಶ್ಚಂದ್ರ, ನವೀನ್ ಶೆಟ್ಟಿ (ರಿಫಾ), ಸತೀಶ್ ಉಳ್ಳಾಲ್, ಕಿರಣ್ ಉಪಾಧ್ಯಾಯ, ಮೋಹನ್ ಎಡನೀರು, ಜೀವಿತ್ ಪೂಂಜ, ಉಪಾಧ್ಯಕ್ಷ ನಿತಿನ್ ಶೆಟ್ಟಿ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ರಾಮ್ ಪ್ರಸಾದ್ ಅಮ್ಮೆನಡ್ಕ ಸ್ವಾಗತಿಸಿ, ವಂದನೆ ಸಲ್ಲಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಸಹಭೋಜನದ ವ್ಯವಸ್ಥೆ ಮಾಡಲಾಗಿತ್ತು.
ವರದಿ-ಕಮಲಾಕ್ಷ ಅಮೀನ್