ಉಡುಪಿ: ನಗರದಲ್ಲಿ ಪೋಷಕರ ಜೊತೆ ಬಿಕ್ಷೆ ಬೇಡುತ್ತಿದ್ದ ಅಪ್ರಾಪ್ತರು; ಮಕ್ಕಳ ರಕ್ಷಣಾ ಘಟಕದಿಂದ ರಕ್ಷಣಾ ಕಾರ್ಯಾಚರಣೆ; 40 ಬಿಕ್ಷುಕರು ರಾಜಸ್ಥಾನಕ್ಕೆ ವಾಪಸ್ !
ಉಡುಪಿ; ಅಪ್ರಾಪ್ತ ಮಕ್ಕಳು, ಹಾಗೂ ವಯಸ್ಕರು ಒಟ್ಟು ಸೇರಿ ನಲವತ್ತರಷ್ಟಿದ್ದ ಹೊರರಾಜ್ಯದ ಬಿಕ್ಷುಕರನ್ನು ಮನವೊಲಿಸಿ ಊರಿಗೆ ರವಾನಿಸುವ ಕಾರ್ಯಾಚರಣೆ ಉಡುಪಿಯಲ್ಲಿ ನಡೆಯಿತು. ಮಕ್ಕಳ ರಕ್ಷಣಾ ಘಟಕ ಹಾಗೂ ಸಮಾಜ ಸೇವಕ ಒಳಕಾಡು ಇವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು. ಮನವೊಲಿಕೆಗೆ ಸ್ಪಂದಿಸಿದ ಬಿಕ್ಷುಕರನ್ನು ರೈಲು ಹತ್ತಿಸಿ, ರಾಜಸ್ಥಾನಕ್ಕೆ ರವಾನಿಸಲಾಯಿತು.
ಇವರು ನಗರದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳ, ಶ್ರೀಕೃಷ್ಣ ಮಠದ ಪರಿಸರದಲ್ಲಿ ಬಿಕ್ಷಾಟನೆ ಮಾಡುತ್ತಿದ್ದರು. ಕಲಿಕೆಯಿಂದ ಹೊರವುಳಿದ ಅಪ್ರಾಪ್ತ ಮಕ್ಕಳು ಹೆತ್ತವರ ಜೊತೆ ಸೇರಿ ಬಿಕ್ಷಾಟನೆ ನಡೆಸುತ್ತಿದ್ದರು.ಈ ಬಗ್ಗೆ, ಮಕ್ಕಳ ಸಹಾಯವಾಣಿಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಈ ಹಿನ್ನಲೆಯಲ್ಲಿ ಕಾರ್ಯಚರಣೆ ನಡೆಸಲಾಯಿತು.
ಈ ಕಾರ್ಯಚರಣೆಯಲ್ಲಿ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ವಿಶಾಲ್, ರಮ್ಯ, ಅಕ್ಷತಾ, ವಿದ್ಯಾಶ್ರೀ, ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಆರಕ್ಷಕ ತುರ್ತು ಸಹಾಯವಾಣಿ 112 ಘಟಕದ ಸಿಬ್ಬಂದಿಗಳು ಹಾಗೂ ಯೋಗೀಶ್, ಸವಿತಾ ಭಾಗಿಯಾಗಿದ್ದರು.