ಬುದ್ಧನ ನಾಡನ್ನು ಯುಪಿ, ಗುಜರಾತ್, ಬಿಹಾರ ಮಾಡಲು ಬಿಡಲ್ಲ: ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶದಲ್ಲಿ ಸಿ.ಬಸವಲಿಂಗಯ್ಯ
ಬೆಂಗಳೂರು(Headlines Kannada): ನಮ್ಮದು ಬುದ್ದನ ನಾಡು, ಆದರೆ ಬುದ್ಧನೇ ಇಲ್ಲಿ ಪರಕೀಯನಾಗಿ ಬಿಟ್ಟಿದ್ದಾನೆ. ಇಲ್ಲಿನ ಮೂಲನಿವಾಸಿಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ. ಇದಕ್ಕೆ ನಾವು ಅವಕಾಶ ಕೊಡಬಾರದು, ಜೊತೆಗೆ ಕರ್ನಾಟಕವನ್ನು ಯುಪಿ, ಗುಜರಾತ್, ಬಿಹಾರ ಮಾಡಲು ನಾವು ಬಿಡಲ್ಲ ಎಂದು ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಹೇಳಿದ್ದಾರೆ.
ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಂಗಳವಾರ ಆರಂಭಗೊಂಡ ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶದಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತಾನಾಡುತ್ತಿದ್ದರು.
ಅಂಬೇಡ್ಕರ್ ಪರಿನಿರ್ವಾಣ ದಿನ ನಮ್ಮ ಪಾಲಿಗೆ ಹಬ್ಬದ ದಿನ, ನಾವು ಇದನ್ನು ಸಂಭ್ರಮಿಸುತ್ತೇವೆ. ಈ ದೇಶದಲ್ಲಿ ದಲಿತರು ಯಾರನ್ನು ಹತ್ಯೆ ಮಾಡಿಲ್ಲ, ಮೋಸ ಮಾಡಿಲ್ಲ ಎಂದ ಬಸವಲಿಂಗಯ್ಯ, ಈ ಹಿಂದೆ ಸಿದ್ದಲಿಂಗಯ್ಯನವರ "ಇಕ್ಕುರ್ಲ ಹೊದಿರ್ಲ ಆ ನನ್ ಮಕ್ಕಳ ಚರ್ಮ ಎಬ್ಬುರ್ಲ" ಎಂದು ಹಾಡಿದ್ದೇವೆ, ಈಗ ನಾವು ಕಟ್ಟುತ್ತೇವೆ, ನಾವು ಕಟ್ಟುತ್ತೇವೆ ಹಾಡನ್ನು ಸಹ ಹಾಡುತ್ತೇವೆ. ನಮ್ಮದು ಸಾಂಸ್ಕೃತಿಕ ಪ್ರತಿರೋಧ ಎಂದರು.
ದಲಿತರ ತಮಟನೆಯನ್ನು ಜನ ಕೀಳೆಂದು ತಿಳಿದಿದ್ದರೇ . ಅದನ್ನೆ ನಮ್ಮ ಹೋರಾಟದ ಅಸ್ತ್ರ ಮಾಡಿಕೊಂಡಿದ್ದೇವೆ. ಇಂಥ ಸಾಂಸ್ಕೃತಿಕ ಆಯುಧಗಳ ಮೂಲಕ ಹೊಸ ಪ್ರತಿರೋಧ ಚಳವಳಿ ಕಟ್ಟುತ್ತೇವೆ. ಏಕೆಂದರೆ ಡಿಎಸ್ಎಸ್ ಎಂಬುದು ಒಂದು ಪಕ್ಷವಲ್ಲ, ಬದಲಿಗೆ ಅದು ದಲಿತರ ಶಕ್ತಿ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಮಾ ಅಂಬೇಡ್ಕರ್ರವರು ಆಗಮಿಸಿದ್ದಾರೆ.