'ಗಡ್ಕರಿ ಶೇಕ್', 'ಬೊಮ್ಮಾಯುಲ್ಲಾ', 'ಜಬ್ಬಾರ್ ಖಾನ್', 'ಅಶ್ವಾಖ್ ಖಾನ್' ಎಂದು ಹೆಸರಿಡುತ್ತೀರಾ !: BJP ವಿರುದ್ಧ 'ಕೈ' ಸರಣಿ ಟ್ವಿಟ್



ಬೆಂಗಳೂರು(Headlines Kannada): ಕಾಂಗ್ರೆಸ್ ನಾಯಕ ಸಿದ್ದರಾಮಯ್ಯರಿಗೆ 'ಸಿದ್ರಾಮುಲ್ಲಾಖಾನ್' ಎಂದಿದ್ದ ಬಿಜೆಪಿಗೆ ಕಾಂಗ್ರೆಸ್  ಖಡಕ್ ತಿರುಗೇಟು ನೀಡಿದೆ. ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ನಾಯಕರ ಹೆಸರು ಪ್ರಸ್ತಾಪಿಸಿ ಟಾಂಗ್ ಕೊಟ್ಟಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ),  ಸರಣಿ ಟ್ವಿಟ್ ಮಾಡಿದೆ.

BJP ನಾಯಕರ ವಿರುದ್ಧ ಟ್ವಿಟ್ ಮಾಡಿ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್, ನಿಮ್ಮ ಹಲವು ನಾಯಕರಿಗೆ ​​ಈ ಹೆಸರಿಂದ ಕರೆಯಬಹುದೇ? ಎಂದು ಪ್ರಶ್ನಿಸಿದೆ. 

ಮುಖ್ಯಮಂತ್ರಿ ಬಸವರಾಜ್ ಬೊಯ್ಮಾಯಿಗೆ 'ಬೊಮ್ಮಾಯುಲ್ಲಾ ಖಾನ್' ಎನ್ನಬಹುದೇ ? ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ಗೆ 'ಜಬ್ಬಾರ್ ಖಾನ್', ಕಂದಾಯ ಸಚಿವ ಆರ್‌.ಅಶೋಕ್ 'ಅಶ್ವಾಖ್ ಇನಾಯತ್ ಖಾನ್' ಎಂದು ಹೆಸರಿಡುತ್ತೀರಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೆಸರು ಟ್ಯಾಗ್ ಮಾಡಿ ಕಾಂಗ್ರೆಸ್ ತನ್ನ ಸಿಟ್ಟನ್ನು ಹೊರಹಾಕಿದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿಗೆ 'ಮಹಮದ್ ಗಡ್ಕರಿ ಶೇಕ್' ಎಂದು ಮರುನಾಮಕರಣ ಮಾಡುವಿರಾ ? ಎಂದು ಟ್ವೀಟ್​ ಮೂಲಕ ಕಾಂಗ್ರೆಸ್‌ ತಿರುಗೇಟು ನೀಡಿದೆ. ಈ ಎಲ್ಲ ಬಿಜೆಪಿ ನಾಯಕರ ಮುಸ್ಲಿಮರ ಟೋಪಿ, ಟಿಪ್ಪು ಪೇಟಾ ಧರಿಸಿರುವ ಫೋಟೊವನ್ನು ಕರ್ನಾಟಕ ಕಾಂಗ್ರೆಸ್ ಹಂಚಿಕೊಳ್ಳುವ ಮೂಲಕ ಕಿಡಿಕಾರಿದೆ.