
ಸಂವಿಧಾನವನ್ನಿಂದು ಇಂಚಿಂಚೆ ಕಸಿಯಲಾಗುತ್ತಿದೆ, ನಮ್ಮ ಸವಲತ್ತುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ: ಹೋರಾಟಕ್ಕೆ ಕರೆ ನೀಡಿದ ರಮಾಬಾಯಿ ಅಂಬೇಡ್ಕರ್
ಬೆಂಗಳೂರು(Headlines Kannada): ಇಂದು ಸಂವಿಧಾನವನ್ನು ಇಂಚಿಂಚೆ ಕಸಿಯಲಾಗುತ್ತಿದೆ. ನಮ್ಮ ಸವಲತ್ತುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಐಕ್ಯ ಹೋರಾಟ ನಡೆಸಬೇಕೆಂದು ಹೋರಾಟಗಾರ್ತಿ ರಮಾಬಾಯಿ ಅಂಬೇಡ್ಕರ್ ಕರೆ ನೀಡಿದ್ದಾರೆ.
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಂಗಳವಾರ ದಲಿತರ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಹಕ್ಕುಗಳಿಗಾಗಿ ದಲಿತ ಸಂಘಟನೆಗಳು ಇಂದು ಒಂದಾಗುತ್ತಿರುವುದು ಭರವಸೆ ಮೂಡಿಸಿದೆ ಎಂದರು.
ಸಂಘರ್ಷ ಮಾಡುವುದು ನಮ್ಮ ಹಕ್ಕಾಗಿದೆ. ಎಲ್ಲರಿಗೂ ಮತದಾನದ ಹಕ್ಕು ನೀಡಿದ್ದಾರೆ. ಬಡವರಿಗೆ, ಬಲ್ಲಿದರಿಗೆಲ್ಲರಿಗೂ ಒಂದು ಮತದಾನದ ಹಕ್ಕು ನೀಡಿದ್ದಾರೆ. ಮಹಿಳಾ ಶಿಕ್ಷಣದ ಬಗ್ಗೆ ಬಾಬಾ ಸಾಹೇಬರು ಒತ್ತಿ ಹೇಳಿದ್ದಾರೆ. ಮಹಿಳಾ ಶೀಕ್ಷಣದಿಂದ ಇಡೀ ಸಮಾಜದ ಶಕ್ತಿಯಾಗುತ್ತಾಳೆ. ನಾವು ಸಾಹೇಬರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸುವುದೆಂದರೆ ಶಿಕ್ಷಿತರಾಗಿ ಮುಂದುವರಿಯುವುದಾಗಿದೆ ಎಂದರು.
ನೀವು ಬಾಬಾ ಸಾಹೇಬರು ಹೇಳಿದಂತೆ ನಿಮ್ಮ ನಾಯಕರನ್ನು ಆಯ್ಕೆ ಮಾಡಿಕೊಂಡು ಸಂಘಟನೆ ಕಟ್ಟಿ, ಸಂಘರ್ಷವನ್ನು ಮಾಡಿ ಎಂದ ರಮಾಬಾಯಿ ಅಂಬೇಡ್ಕರ್, ವಿದ್ಯಾರ್ಥಿ ವೇತನ ಕಿತ್ತುಕೊಳ್ಳುತ್ತಿದ್ದಾರೆ. ಶಿಕ್ಷಣ ಕಿತ್ತುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಾಬಾ ಸಾಹೇಬರು ಹೇಳಿದಂತೆ ಹೋರಾಟವೇ ಮುಖ್ಯ ಎಂದರು.
ಇಷ್ಟು ದೊಡ್ಡ ಜನರು ಸೇರಿರುವುದನ್ನು ನೋಡಿ ಸಂತೋಷವಾಗುತ್ತಿದೆ. ನಾವು ಸಂಘರ್ಷದ ಹಾದಿ ತುಳಿಬೇಕಿದೆ. ತೇಲ್ತುಂಬ್ದೆಯವರು ಜೈಲಿನಲ್ಲಿದ್ದಾಗ ನೀವೆಲ್ಲ ಜೊತೆಯಲ್ಲಿದ್ದೀರಿ. ಅದಕ್ಕೆ ಧನ್ಯವಾದವನ್ನು ರಮಾಬಾಯಿ ಅಂಬೇಡ್ಕರ್ ಸಲ್ಲಿಸಿದರು.