ಉಡುಪಿ: ಪಾಸ್ ಪೋರ್ಟ್ ಗಾಗಿ ಸುಳ್ಳು ದಾಖಲೆ ಸೃಷ್ಠಿಸಿ ವಂ#ಚಿಸಿದ ಆರೋಪಿಗಳಿಗೆ ಜೈಲು ಶಿಕ್ಷೆ



ಉಡುಪಿ(Headlines Kannada): 13 ವರ್ಷಗಳ ಹಿಂದೆ ಪಾಸ್ ಪೋರ್ಟ್ ಗಾಗಿ ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ವಂ#ಚಿಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಿಗೆ ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ನೀಡಿದೆ.

ಪಲಿಮಾರು ಗ್ರಾಮದ ರಾಖಿ ವಿನ್‌ಸೆಂಟ್ ಡಿ ಸೋಜಾ ಎಂಬಾತನು ತನ್ನ ಅಣ್ಣನಾದ ಪಿಯೂಶ್ ಆಗಸ್ಟಿನ್ ಡಿ ಸೋಜ ಅವರ ಹೆಸರನ್ನು ದುರ್ಬಳಕೆ ಮಾಡಿ, ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ತನ್ನದೇ ಭಾವಚಿತ್ರ ಹಾಗೂ ಬೇರೆ ಬೇರೆ ಹೆಸರು ಮತ್ತು ವಿಳಾಸದ ಪಾಸ್‌ಪೋರ್ಟ್ ಗಳನ್ನು ಹೊಂದಿದ್ದನು. ಪಾವುಲ್ ಡಿಸೋಜಾ ಎಂಬಾತನು ನಕಲಿ ಪಾಸ್ ಪೋರ್ಟ್ ಗಳನ್ನು ಸೃಷ್ಟಿಸಲು ಬೇಕಾಗುವ ಎಲ್ಲಾ ದಾಖಲೆಗಳನ್ನು ನೀಡಿದ್ದನು. 

ವಿಜಯ್‌ರಾವ್ ಮತ್ತು ಮಹೇಂದ್ರ ಬಾಬು ಅವರು ತಮ್ಮ ಏಜನ್ಸಿಯ ಮೂಲಕ ರಾಖಿ ವಿನ್‌ಸೆಂಟ್ ಡಿ ಸೋಜಾಗೆ ಬೇರೆ ಬೇರೆ ಕೇಂದ್ರಗಳಿಂದ ಪಾಸ್‌ಪೋರ್ಟ್ ಗಳನ್ನು ಪಡೆದುಕೊಳ್ಳಲು ಸಹಕರಿಸಿದ್ದರು. ಆ ಬಳಿಕ ರಾಖಿ ವಿನ್‌ಸೆಂಟ್ ಡಿ ಸೋಜಾ ನಕಲಿ ಪಾಸ್‌ಪೋರ್ಟ್ ಗಳನ್ನು ನೈಜ್ಯವೆಂದು ನಂಬಿಸಿ ಸರಕಾರಕ್ಕೆ ವಂ#ಚಿಸಿ ಇಸ್ರೇಲ್ ನಲ್ಲಿ ಉದ್ಯೋಗ ಪಡೆದುಕೊಂಡಿದ್ದರು. 

ಉದ್ಯೋಗ ಮಾಡುತ್ತಿರುವ ಬಗ್ಗೆ ಮತ್ತು ರಜೆಯಲ್ಲಿ ದೇಶಕ್ಕೆ ವಾಪಾಸು ಬಂದ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಕರಾವಳಿ ಕಾವಲು ಪಡೆಯ ಪೊಲೀಸರು ಉಡುಪಿ ತಾಲೂಕು ಕಾಪು ಗ್ರಾಮದ ಲೈಟ್‌ಹೌಸ್ ಬೀಚಿನ ಬಳಿ ರಾಖಿ ವಿನ್‌ಸೆಂಟ್ ಡಿ ಸೋಜಾ ಎಂಬಾತನನ್ನು ಪಾಸ್‌ಪೋರ್ಟ್ ಸಮೇತ ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದರು. ಆರೋಪಿತರೆಲ್ಲರೂ ಸೇರಿ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ವಂ#ಚಿಸಿ ದ್ರೋಹ ಎಸಗಿರುವ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್ ಕಾಯ್ದೆಯಡಿ ಉಡುಪಿ ಕರಾವಳಿ ಕಾವಲು ಪಡೆಯ ವೃತ್ತ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶೆ ದೀಪಾ ಅವರು ರಾಖಿ ವಿನ್‌ಸೆಂಟ್ ಡಿ ಸೋಜಾಗೆ 3 ವರ್ಷ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ, ವಿಜಯ್‌ರಾವ್ ಮತ್ತು ಮಹೇಂದ್ರ ಬಾಬುಗೆ ತಲಾ 1 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ಮತ್ತು ಎಲ್ಲಾ ಆರೋಪಿತರಿಗೆ ಪಾಸ್‌ಪೋರ್ಟ್ ಕಾಯ್ದೆಯಡಿಯಲ್ಲಿ ತಲಾ 1 ವರ್ಷ ಜೈಲು ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕಿ ಜಯಂತಿ.ಕೆ. ವಾದ ಮಂಡಿಸಿದ್ದಾರೆ.