ಜನವರಿ 8ರಂದು ಬೆಂಗಳೂರಿನಲ್ಲಿ ನಡೆಯಲಿದೆ ‘ಜನ ಸಾಹಿತ್ಯ ಸಮ್ಮೇಳನ’; ಕವಿ ಮೂಡ್ನಾ ಕೂಡು ಚಿನ್ನಸ್ವಾಮಿ ಉದ್ಘಾಟನೆ
ಬೆಂಗಳೂರು(Headlines Kannada): ಜನವರಿ 8ರ ರವಿವಾರ ಬೆಂಗಳೂರಿನ ಕೆ.ಆರ್.ವೃತ್ತದಲ್ಲಿರುವ ಅಲುಮ್ನಿ ಅಸೋಸಿಯೇಷನ್ ಆವರಣದಲ್ಲಿ ಸಂತ ಶಿಶುನಾಳ ಶರೀಫ ಮತ್ತು ಗುರುಗೋವಿಂದ ಭಟ್ಟ ಸಭಾಂಗಣದಲ್ಲಿ ಜ.8ರಂದು ‘ಜನ ಸಾಹಿತ್ಯ ಸಮ್ಮೇಳನ’ ಆಯೋಜಿಸಲಾಗಿದೆ.
‘ಜನ ಸಾಹಿತ್ಯ ಸಮ್ಮೇಳನ’ವನ್ನು ಕವಿ ಮೂಡ್ನಾ ಕೂಡು ಚಿನ್ನಸ್ವಾಮಿ ಉದ್ಘಾಟಿಸಲಿದ್ದಾರೆ. ಸಂತ ಶಿಶುನಾಳ ಶರೀಫ ಹಾಗು ಗುರು ಗೋವಿಂದಭಟ್ಟಸಭಾಂಗಣದಲ್ಲಿ ಬೆಳಗ್ಗೆ 9ಕ್ಕೆ ಕನ್ನಡ ಧ್ವಜಾರೋಹಣ ನೆರವೇರಲಿದ್ದು, ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್, ಶಿವರಾಮೇಗೌಡ, ಬಿ.ಎ.ಜಗದೀಶ್ ಉಪಸ್ಥಿತರಿರುವರು. 9.30ಕ್ಕೆ ಬಂಡಾಯದ ಗೆರೆಗಳು: ವ್ಯಂಗ್ಯಚಿತ್ರ ಮತ್ತು ಪೋಸ್ಟರ್ಗಳ ಪ್ರದರ್ಶನ ನಡೆಯಿದ್ದು, ರಘುನಂದನ ಉದ್ಘಾಟಿಸುವರು.
ಬೆಳಿಗ್ಗೆ 10ಕ್ಕೆ ‘ಚಂಪಾ’ ವೇದಿಕೆಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬಾನು ಮುಷ್ತಾಕ್ ವಹಿಸುವರು. ಪುರುಷೋತ್ತಮ ಬಿಳಿಮಲೆ ದಿಕ್ಸೂಚಿ ಭಾಷಣ ಮಾಡುವರು. ಎಸ್.ಜಾಫೆಟ್, ಜಾಣಗೆರೆ ವೆಂಕಟರಾಮಯ್ಯ, ಜೆನ್ನಿ, ಅಗ್ನಿ ಶ್ರೀಧರ್, ಅಕ್ಕೈ ಪದ್ಮಶಾಲಿ, ವಡ್ಡಗೆರೆ ನಾಗರಾಜಯ್ಯ ಉಪಸ್ಥಿತರಿರುವರು.
ಮಧ್ಯಾಹ್ನ 12.30ಕ್ಕೆ ‘ಸಾಹಿತ್ಯ, ಪ್ರಭುತ್ವ ಮತ್ತು ಬಹುತ್ವ ’ವಿಷಯ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಡಾ.ಮಹಮ್ಮದ್ ಮುಸ್ತಾಫಾ ವಿಷಯ ಮಂಡನೆ ಮಾಡಲಿದ್ದಾರೆ. ಕನ್ನಡ ನಾಡು, ನುಡಿ-ಟಿಪ್ಪು ಕೊಡುಗೆಗಳು ಕುರಿತು ಟಿ.ಗುರುರಾಜ್ ವಿಷಯ ಮಂಡಿಸುವರು. ಲಿಂಗದೇವರು ಹಳೆಮನೆ ಸಂಪಾದಕತ್ವದ ಧೀರಟಿಪ್ಪು ಲಾವಣಿಗಳು ಮತ್ತು ಟಿ.ಗುರುರಾಜ್ ಬರೆದಿರುವ ‘ನಮ್ಮ ಟಿಪ್ಪು-ವದಂತಿ ಮತ್ತು ಸತ್ಯ ಸಂಗತಿ’ ಪುಸ್ತಕ ಬಿಡುಗಡೆ ನೆರವೇರಲಿದೆ.
ಮಧ್ಯಾಹ್ನ 1.30ಕ್ಕೆ ಆಹಾರ ಗೋಷ್ಠಿ ನಡೆಯಲಿದ್ದು ಆಹಾರದ ಮೇಲಿನ ರಾಜಕಾರಣ ಮತ್ತು ದೌರ್ಜನ್ಯ ಕುರಿತು ರಂಗನಾಥ ಕಂಟನಕುಂಟೆ, ಪಲ್ಲವಿ ಇಡೂರ್ ವಿಷಯ ಮಂಡಿಸುವರು. ಮಧ್ಯಾಹ್ನ 2ಕ್ಕೆ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಬಂಜಗೆರೆ ಜಯಪ್ರಕಾಶ್ ವಹಿಸುವರು. ಮಧ್ಯಾಹ್ನ 3ಕ್ಕೆ ‘ಸೌಹಾರ್ದತೆ ಮತ್ತು ಕನ್ನಡತನ’ ಕುರಿತು ರಾಜೇಂದ್ರಚೆನ್ನಿ, ‘ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಿನ ದಾ#ಳಿ’ ಬಗ್ಗೆ ಮಾವಳ್ಳಿ ಶಂಕರ್, ‘ಸಾಹಿತ್ಯ ಲೋಕದ ಜವಾಬ್ದಾರಿಗಳ’ಕುರಿತು ಮುನೀರ್ ಕಾಟಿಪಾಳ್ಯ, ‘ಕನ್ನಡವನ್ನು ಬೆಳಗಿಸಿದ ಕ್ರೈಸ್ತ ಮಿಷನರಿಗಳು’ ಕುರಿತು ಡಾ.ಕುಮಾರಸ್ವಾಮಿ ವಿಷಯ ಮಂಡಿಸುವರು.
ಸಮ್ಮೇಳನದ ಸಮಾರೋಪ ಸಂಜೆ 5ಕ್ಕೆ ನಡೆಯಲಿದ್ದು, ಕೆ.ಮರುಳಸಿದ್ದಪ್ಪ ಸಮಾರೋಪ ಭಾಷಣ ಮಾಡುವರು. ಜಿ.ರಾಮಕೃಷ್ಣ ಅಧ್ಯಕ್ಷತೆ ವಹಿಸುವರು. ಸಿ.ಬಸವಲಿಂಗಯ್ಯ, ಪಿಚ್ಚಳ್ಳಿ ಶ್ರೀನಿವಾಸ್, ದು.ಸರಸ್ವತಿ, ಯು.ಟಿ.ಫರ್ಜಾನ, ವಸಂತರಾಜ್, ಅನಂತ್ ನಾಯಕ್, ರವಿಕುಮಾರ್ ಟೆಲೆಕ್ಸ್ ಭಾಗವಹಿಸುವರು.