ರಾಹುಲ್ ಗಾಂಧಿಯ 'ಭಾರತ್ ಜೋಡೋ ಯಾತ್ರೆ'ಯನ್ನು ಶ್ಲಾಘಿಸಿದ ರಾಮಮಂದಿರ ಟ್ರಸ್ಟ್‌ನ ಕಾರ್ಯದರ್ಶಿ: ರಾಹುಲ್ ಗಾಂಧಿ ಬಗ್ಗೆ ಹೇಳಿದ್ದೇನು..?


ಅಯೋಧ್ಯ(Headlines Kannada): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ ಬಗ್ಗೆ ಮೇಲಿಂದ ಮೇಲೆ ಮೆಚ್ಚಿಗೆ ವ್ಯಕ್ತವಾಗುತ್ತಿರುವ ಮಧ್ಯೆ ಇಂದು ರಾಮಮಂದಿರ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್ ಶ್ಲಾಘಿಸಿದ್ದು, ಕಠಿಣ ಹವಾಮಾನದ ಪರಿಸ್ಥಿತಿಯಲ್ಲೂ ರಾಹುಲ್ ಗಾಂಧಿ ನಡೆಯುತ್ತಿದ್ದಾರೆ ಮತ್ತು ಅದನ್ನು ಪ್ರಶಂಸಿಸಬೇಕು ಎಂದಿದ್ದಾರೆ.

ನಿನ್ನೆ ರಾಮಜನ್ಮಭೂಮಿ ದೇವಸ್ಥಾನದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಯಾತ್ರೆಗೆ ರಾಹುಲ್ ಗಾಂಧಿಯನ್ನು 'ಆಶೀರ್ವದಿಸಿ' ಬೆಂಬಲಿಸಿದ ಒಂದು ದಿನದ ನಂತರ ಮಂಗಳವಾರ ರಾಮಮಂದಿರ ಟ್ರಸ್ಟ್ ಕಾರ್ಯದರ್ಶಿ ಇದೀಗ ಈ ಹೇಳಿಕೆ  ನೀಡಿರುವುದು ಎಲ್ಲರೂ ಕಾಂಗ್ರೆಸಿನತ್ತ ನೋಡುವಂತೆ ಮಾಡಿದೆ.

ದೇಶದಲ್ಲಿ ಕಾಲ್ನಡಿಗೆಯಲ್ಲಿ ಸಾಗುತ್ತಿರುವ ಯುವಕನಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿರುವ ಚಂಪತ್ ರಾಯ್, ಅವರ ನಡೆಯನ್ನು ಮೆಚ್ಚುತ್ತೇನೆ. ಅದರಲ್ಲಿ ತಪ್ಪೇನೂ ಇಲ್ಲ ಎಂದಿದ್ದಾರೆ.

ಮಂಗಳವಾರ ಉತ್ತರ ಪ್ರದೇಶಕ್ಕೆ ಪ್ರವೇಶಿಸಿದ ಯಾತ್ರೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಚಂಪತ್ ರಾಯ್, 'ನಾನು RSS ಕಾರ್ಯಕರ್ತ ಮತ್ತು RSS ಭಾರತ್ ಜೋಡೋ ಯಾತ್ರೆಯನ್ನು ಎಂದಿಗೂ ಖಂಡಿಸಿಲ್ಲ' ಎಂದು ಹೇಳಿದರು.

'ರಾಹುಲ್ ಗಾಂಧಿ ಕಠಿಣ ವಾತಾವರಣದಲ್ಲಿ ನಡೆಯುತ್ತಿದ್ದಾರೆ ಮತ್ತು ಇದನ್ನು ಪ್ರಶಂಸಿಸಲೇಬೇಕು. ಪ್ರತಿಯೊಬ್ಬರೂ ದೇಶದ ಯಾತ್ರೆ ಮಾಡಬೇಕು ಎಂದು ನಾನು ಹೇಳುತ್ತೇನೆ' ಎಂದಿದ್ದಾರೆ.

ಅಯೋಧ್ಯೆಯ ರಾಮಮಂದಿರ ಟ್ರಸ್ಟ್‌ನ ಇನ್ನೊಬ್ಬ ಹಿರಿಯ ಟ್ರಸ್ಟಿ ಗೋವಿಂದ್ ದೇವ್ ಗಿರಿ ಕೂಡ ರಾಹುಲ್ಭಾ ಗಾಂಧಿಯ ಭಾರತ್ ಜೋಡೋ ಯಾತ್ರೆಯನ್ನು ಶ್ಲಾಘಿಸಿದರು.

'ರಾಷ್ಟ್ರವು ಒಗ್ಗಟ್ಟಾಗಿ, ಸದೃಢವಾಗಿ ಹಾಗು ಸೌಹಾರ್ದಯುತವಾಗಿ ಉಳಿಯುವಂತೆ ಆಶೀರ್ವದಿಸಬೇಕೆಂದು ಶ್ರೀರಾಮನನ್ನು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.