
ನನಗೆ ಈ ಬಾರಿ ಟಿಕೆಟ್ ಕೈತಪ್ಪಲು ಸಿಟಿ ರವಿಯೇ ಕಾರಣ: ಶಾಸಕ ಸ್ಥಾನ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಎಂಪಿ ಕುಮಾರಸ್ವಾಮಿ
Thursday, April 13, 2023
ಬೆಂಗಳೂರು: 2ನೇ ಪಟ್ಟಿ ಬಿಡುಗಡೆಯಲ್ಲಿ ತನ್ನ ಹೆಸರನ್ನು ಕೈಬಿಟ್ಟಿದ್ದಕ್ಕೆ ಕೆಂಡಾಮಂಡಲವಾಗಿರುವ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಶಾಸಕ ಸ್ಥಾನಕ್ಕೆ ಮತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ತನಗೆ ಟಿಕೆಟ್ ಕೈತಪ್ಪಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರೇ ಕಾರಣ ಎಂದು ಕಿಡಿಕಾರಿರುವ ಎಂ.ಪಿ. ಕುಮಾರಸ್ವಾಮಿ, ನಾನು ಅವರಿಗೆ ನಿಷ್ಠರಾಗಿ ಹೋಗಬೇಕು, ಅದು ನನ್ನಿಂದ ಸಾಧ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿ ನೆಲಕಚ್ಚಲು ಈ ಬಾರಿ ಸಿ.ಟಿ.ರವಿ ಕಾರಣ ಆಗುತ್ತಾರೆ. ದೆಹಲಿಯಲ್ಲಿ ಶಾಸಕ ಸಿ.ಟಿ.ರವಿ ಕಣ್ಣಾಮುಚ್ಚಾಲೆ ಆಟ ಆಡಿದ್ದರಿಂದಲೇ ನನಗೆ ಟಿಕೆಟ್ ತಪ್ಪಿದೆ. ಈ ಬಾರಿ ಬಿಎಸ್ ಯಡಿಯೂರಪ್ಪ ಅವರು ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡ್ರೆ ಬಿಜೆಪಿಗೆ 50 ಸ್ಥಾನವೂ ಬರಲ್ಲ. ಬಿಜೆಪಿಗೆ ನಾನು ಏನು ಅನ್ಯಾಯ ಮಾಡಿದ್ದೇನೆ. ಜನರ ಸೇವೆ ಮಾಡುವ ಶಕ್ತಿ ಇನ್ನೂ ಇದೆ ಎಂದು ಎಂ.ಪಿ. ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.