ನೇಜಾರು ಹತ್ಯಾ ಪ್ರಕರಣ: ಆರೋಪಿ ಪ್ರವೀಣ್ ಚೌಗಲೆಯನ್ನು ಕೆಲಸದಿಂದ ಅಮಾನತುಗೊಳಿಸಿದ ‘ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌’

ಮಂಗಳೂರು: ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಹಂತಕ ಪ್ರವೀಣ್ ಅರುಣ್ ಚೌಗಲೆಯನ್ನು ‘ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌’ ವಿಮಾನಯಾನ ಸಂಸ್ಥೆಯು ಕೆಲಸದಿಂದ ಅಮಾನತುಗೊಳಿಸಿದೆ.

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಯಾನ ಸಂಸ್ಥೆಯಲ್ಲಿ ಕ್ಯಾಬಿನ್ ಸಿಬ್ಬಂದಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೊಲೆ ಆರೋಪಿ ಪ್ರವೀಣ್ ಅರುಣ್ ಚೌಗಲೆ, ಉಡುಪಿ ನೇಜಾರಿನಲ್ಲಿ ನ.12ರಂದು ಒಂದೇ ಕುಟುಂಬದ ಹಸೀನಾ (51), ಆಕೆಯ ಮಕ್ಕಳಾದ ಅಫ್ನಾನ್‌(23), ಐನಾಜ್‌ (21) ಹಾಗೂ ಆಸೀಮ್‌ (13) ಎಂಬವರನ್ನು ಚಾಕಿವಿನಿಂದ ಹತ್ಯೆ ಮಾಡಿ ಪರಾರಿಯಾಗಿದ್ದ. ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಯಾನ ಸಂಸ್ಥೆಯಲ್ಲಿ ಸಹೋದ್ಯೋಗಿಯಾಗಿದ್ದ  ಐನಾಜ್‌ ಮೇಲಿನ ದ್ವೇಷದಿಂದ ಹಂತಕ ಪ್ರವೀಣ್ ಅರುಣ್ ಚೌಗಲೆ ಈ ಕೃತ್ಯ ನಡೆಸಿದ್ದಾನೆ.

‘ಈ ಘಟನೆಯಿಂದ ನಮಗೆ ತೀವ್ರ ದುಃಖವಾಗಿದ್ದು, ಮೃತರ ಸಂಬಂಧಿಗಳಿಗೆ ನಾವು ಬೆಂಬಲ ನೀಡಿ, ತನಿಖೆಗೆ ಎಲ್ಲ ಸಹಕಾರ ನೀಡುತ್ತೇವೆ. ಈ ಘಟನೆ ಗಮನಕ್ಕೆ ಬಂದ ತಕ್ಷಣದಿಂದಲೇ ಆತನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ’ ಎಂದು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಯಾನ ಸಂಸ್ಥೆಯ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.