
ಖ್ಯಾತ ಗಾಯಕ ಪಂಕಜ್ ಉಧಾಸ್ ಇನ್ನಿಲ್ಲ!
ಮುಂಬೈ: ಜನಪ್ರಿಯ ಗಾಯಕ ಪಂಕಜ್ ಉಧಾಸ್ ಅವರು ನಿಧನರಾಗಿದ್ದಾರೆ. ಹಲವು ತಿಂಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. 73ರ ಪ್ರಾಯದ ಅವರು ಇಂದು (ಫೆಬ್ರವರಿ 26) ಕೊನೆಯುಸಿರು ಎಳೆದರು. ಅವರ ನಿಧನದ ಸುದ್ದಿಯನ್ನು ಪುತ್ರಿ ನಯಾಬ್ ಉಧಾಸ್ ಖಚಿತಪಡಿಸಿದ್ದಾರೆ.
ಸ್ಪರ್ಶ ಚಿತ್ರದ ‘ಬರೆಯದ ಮೌನ ಕವಿತೆ’, ‘ಚಂದಕ್ಕಿಂತ ಚಂದ ನೀನೆ ಸುಂದರ’ ಸೇರಿದಂತೆ ಕನ್ನಡ, ಹಿಂದಿ ಭಾಷೆಗಳಲ್ಲಿ ಹಿನ್ನೆಲೆ ಗಾಯಕರಾಗಿ ಘಜಲ್ ಗಾಯಕ ಪಂಕಜ್ ಉಧಾಸ್ ಹೆಸರುವಾಸುಯಾಗಿದ್ದರು.
ಗುಜರಾತ್ನ ಜೆತ್ಪುರದಲ್ಲಿ 1951, ಮೇ 17 ರಂದು ಜನಿಸಿದ ಪಂಕಜ್ ಅವರದ್ದು ಸಂಗೀತದ ಕುಟುಂಬ. ಪಂಕಜ್ ಅವರ ಸಹೋದರ ಮನ್ಹಾರ್ ಉಧಾಸ್ ಅವರು ಕೂಡ ಗಾಯಕರಾಗಿದ್ದಾರೆ. ಒಬ್ಬರೇ 60 ಕ್ಕೂ ಹೆಚ್ಚು ಆಲ್ಬಮ್ ಬಿಡುಗಡೆ ಮಾಡಿದ ಖ್ಯಾತಿ ಪಂಕಜ್ ಅವರಿಗೆ ಸಲ್ಲುತ್ತದೆ.
1980ರಲ್ಲಿ ‘ಆಹತ್’ ಎನ್ನುವ ಘಜಲ್ ಆಲ್ಬಮ್ ಹೊರತಂದಿದ್ದರು, ಅಲ್ಲಿಂದ ಆರಂಭವಾದ ಅವರ ಘಜಲ್ ಪಯಣ ಮುಂದುವರಿದು, ಮುಕರಾರ್. ಮೆಹಫಿಲ್, ತರನುಮ್ನಂತಹ ಜನಪ್ರಿಯ ಘಜಲ್ಗಳನ್ನು ಕೇಳುಗರಿಗೆ ಪರಿಚಯಿಸಿದ್ದಾರೆ.
ಹಿನ್ನೆಲೆ ಗಾಯಕರೂ ಆಗಿರುವ ಪಂಕಜ್, 1986 ರ ಕ್ರೈಮ್ ಥ್ರಿಲ್ಲರ್ ‘ನಾಮ್’ ಚಿತ್ರದ ‘ಚಿಟ್ಟಿ ಆಯಿ ಹೈ’ ಹಾಡಿನ ಮೂಲಕ ಇನ್ನಷ್ಟು ಜನಪ್ರಿಯರಾದರು.
1990ರಲ್ಲಿ ಲತಾ ಮಂಗೇಶ್ಕರ್ ಅವರೊಂದಿಗೆ ಹಾಡಿದ ‘ಘಯಾಲ್’ ಚಿತ್ರದ ‘ಮಹಿಯಾ ತೇರಿ ಕಸಮ್’ ಹಾಡು ಕೂಡ ಜನಪ್ರಿಯತೆ ಗಳಿಸಿತ್ತು.
ಕನ್ನಡದ ಸ್ಪರ್ಶ, ಹಿಂದಿಯ ‘ಸಾಜನ್’, ‘ನಾಮ್’, ‘ಫಿರ್ ತೇರಿ ಕಹಾನಿ ಯಾದ್ ಆಯಿ’ ಸೇರಿ ಅನೇಕ ಚಿತ್ರಗಳ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಪಂಕಜ್ ಅವರ ಹಾಡಿಗೆ ಹಲವು ಫಿಲ್ಮ್ಂ ಫೇರ್ ಪ್ರಶಸ್ತಿಗಳು, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ ಸಂಗೀತ ಕ್ಷೇತ್ರದಲ್ಲಿನ ಸಾಧನೆಗೆ 2006ರಲ್ಲಿ ಪದ್ಮಶ್ರೀ ಪ್ರಶಸ್ತಿ ಕೂಡ ದೊರಕಿದೆ.
ಪಂಕಜ್ ಉಧಾಸ್ ಅವರ ನಿಧನಕ್ಕೆ ರಾಜಕೀಯ, ಸಿನಿಮಾ ಹಾಗೂ ಸಂಗೀತ ಲೋಕದ ಗಣ್ಯರು ಸಂತಾಪ ಸೂಚಿಸಿದ್ದಾರೆ.