ಹೆಬ್ರಿ ಸೀತಾನದಿಯಲ್ಲಿ ಸ್ನಾನಕ್ಕೆಂದು ಇಳಿದ ಇಬ್ಬರ ಸಾವು

ಉಡುಪಿ: ಸೀತಾನದಿಗೆ ಸ್ನಾನಕ್ಕೆಂದು ಇಳಿದ ಇಬ್ಬರು ಮುಳುಗಿ ಮೃತಪಟ್ಟ ಘಟನೆ ಹೆಬ್ರಿ ಸಮೀಪದ ನೆಲ್ಲಿಕಟ್ಟೆ ಕ್ರಾಸ್‌ನ ಬಳಿ ರವಿವಾರ ಸಂಜೆ ನಡೆದಿದೆ. 

ಮೃತರನ್ನು ಶಿವಮೊಗ್ಗ ಮೂಲದ ಶೃಂಗೇರಿಯಲ್ಲಿ ವೈದ್ಯರಾಗಿರುವ ಡಾ. ದೀಪಕ್‌(34) ಹಾಗೂ ಶಿವಮೊಗ್ಗದ ಉದ್ಯಮಿ ಸಿನು ಡೇನಿಯಲ್‌ (40) ಎಂದು ಗುರುತಿಸಲಾಗಿದೆ.

ಸಿನು ಡ್ಯಾನಿಯಲ್‌ ಅವರು ತನ್ನ ವೈದ್ಯ ಮಿತ್ರ ಡಾ| ವಿನ್ಸೆಂಟ್‌ ಎಂ.ಸಿ. ಮೋಹನ್‌ ಜತೆಗೆ ಶಿವಮೊಗ್ಗದಿಂದ ಹೆಬ್ರಿಗೆ ಬಂದು ಮಣಿಪಾಲದಿಂದ ಬಂದ ವೈದ್ಯ ದೀಪಕ್‌ ಅವರೊಂದಿಗೆ ಹೆಬ್ರಿಯಲ್ಲಿ ಜತೆಯಾಗಿ ಊಟ ಮಾಡಿ ಸೋಮೇಶ್ವರ ಕಡೆ ಹೋಗುವಾಗ ಸೀತಾನದಿಯಲ್ಲಿ ಸ್ನಾನಕ್ಕಿಳಿದರು. ಸಿನು ಡ್ಯಾನಿಯಲ್‌ ಸ್ನಾನ ಮಾಡುತ್ತಾ ಮುಂದೆ ಹೋಗಿದ್ದು,ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿದರು. ಇದನ್ನು ಗಮನಿಸಿದ ದೀಪಕ್‌ ನೀರಿಗೆ ಹಾರಿ ಅವರನ್ನು ರಕ್ಷಿಸಲು ಮುಂದಾಗಿದ್ದು ಇಬ್ಬರೂ ಮುಳುಗಿದರು.

ಡಾ. ವಿನ್ಸೆಂಟ್‌ ಸ್ನೇಹಿತರನ್ನು ರಕ್ಷಿಸಲು ನದಿಗೆ ಧುಮುಕಿದರೂ ಈಜು ಬಾರದ ಕಾರಣ ಅವರನ್ನು ರಕ್ಷಿಸಲು ಸಾಧ್ಯವಾಗದೆ ಮರದ ಬೇರನ್ನು ಹಿಡಿದು ಮೇಲೆ ಬಂದರು. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.