![ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲವನ್ನಷ್ಟೇ ನೀಡಿದ್ದು ಇನ್ನೂ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ: ಆರ್.ಅಶೋಕ್ ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲವನ್ನಷ್ಟೇ ನೀಡಿದ್ದು ಇನ್ನೂ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ: ಆರ್.ಅಶೋಕ್](https://blogger.googleusercontent.com/img/b/R29vZ2xl/AVvXsEjlCK-i1b6_Q_Ffr9f5-a8MkmI57KHp1HdbrQWjBNoYs8-PMEUPxkBTlI21E56CMJtTR9KrcFSjmpsRaet-JUgw5DwxLX0yVcWciDdJh0cxfPd77WCcOuUHXkNTGkhN-LXBaDL3XGT2IzcJlP3CWagKgBOJuy2tzULOE8-C4IE-i0xSHv_B9cRmRDnah2mX/w640-h336/ashok.jpg)
ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲವನ್ನಷ್ಟೇ ನೀಡಿದ್ದು ಇನ್ನೂ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ: ಆರ್.ಅಶೋಕ್
ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲವನ್ನಷ್ಟೇ ನೀಡಿದ್ದಾರೆ. ಇನ್ನೂ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ. ಹೀಗಾಗಿ ಅವರ ಸ್ಪರ್ಧೆ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎಂದು ವಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಮಂಡ್ಯದಲ್ಲಿ ಬಿಜೆಪಿಯಿಂದ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಸಂಸದೆ ಸುಮಲತಾ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು.
ಸುಮಲತಾ ಅಂಬರೀಶ್ ನಮಗೆ ಬರೀ ಬೆಂಬಲ ಅಷ್ಟೇ ಕೊಟ್ಟಿದ್ದಾರೆ. ಆದರ, ಅವರು ಇನ್ನೂ ಪಕ್ಷಕ್ಕೆ ಸೇರಿಲ್ಲ, ಪಕ್ಷಕ್ಕೆ ಸೇರ್ಪಡೆಗೊಳ್ಳಬೇಕಿರುವವರು ಆರು ತಿಂಗಳ ಮುಂಚೆ ಸೇರಬೇಕಿತ್ತು. ಹೀಗಾಗಿ ಅವರ ಬಗ್ಗೆ ವರಿಷ್ಠರು ತೀರ್ಮಾನ ಮಾಡ್ತಾರೆ. ಮಂಡ್ಯದಲ್ಲಿ ನಮಗೆ ಮತಗಳಿಕೆ ಜಾಸ್ತಿಯಾಗಿದೆ, ನಮ್ಮ ಹಾಗೂ ಜೆಡಿಎಸ್ ಇಬ್ಬರ ಶಕ್ತಿ ಸೇರಿದರೆ ಜಾಸ್ತಿ ಆಗಿದೆ. ಹೀಗಾಗಿ ಈ ಬಾರಿ ಮಂಡ್ಯದಲ್ಲಿ ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು, ಮಂಡ್ಯ, ಗುಲ್ಬರ್ಗ, ಹಾಸನ ಎಲ್ಲಾ ಕ್ಷೇತ್ರಗಳ ಬಗ್ಗೆ ಚರ್ಚೆ ಆಗಿದೆ. ಹಾಲಿ ಉತ್ತಮ ಸಂಸದರಿಗೆ ಮತ್ತೊಮ್ಮೆ ಅವಕಾಶ ಕೊಡುವ ಬಗ್ಗೆ ಚರ್ಚೆ ಆಗಿದೆ. ಬೆಂಗಳೂರು ಉತ್ತರಕ್ಕೆ ನಮ್ಮ ಅಭಿಪ್ರಾಯವನ್ನು ನಾವು ತಿಳಿಸಿದ್ದೇವೆ. ಮುಂದಿನ ತೀರ್ಮಾನವನ್ನು ನಮ್ಮ ವರಿಷ್ಠರು ಮಾಡುತ್ತಾರೆ. ಜೆಡಿಎಸ್ ನಾಯಕರು ಇನ್ನು ಎರಡು-ಮೂರು ದಿನಗಳಲ್ಲಿ ದೆಹಲಿಗೆ ಹೋಗುತ್ತಾರೆ. ಅವರು ಯಾವ ಕ್ಷೇತ್ರದಲ್ಲಿ ಸೀಟು ಕೇಳುತ್ತಾರೋ ಅದನ್ನು ಬಿಟ್ಟು ಕೊಡುವ ಬಗ್ಗೆ ವರಿಷ್ಠರು ಮಾತಾಡುತ್ತಾರೆ ಎಂದು ಹೇಳಿದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಹೆಚ್ಚು ಟಿಕೆಟ್ ಸಿಗಬಹುದು. ಇನ್ನೊಂದು ಸುತ್ತಿನ ಮಾತುಕತೆ ಆದ ಕೂಡಲೇ ಪಟ್ಟಿ ಬಿಡುಗಡೆ ಮಾಡುತ್ತಾರೆ. ಯಾವ ಕ್ಷೇತ್ರದಲ್ಲಿ ಸಮಸ್ಯೆ ಇದೆಯೋ ಅಲ್ಲಿ ಮತ್ತೊಮ್ಮೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತಾರೆ. ಈ ಬಾರಿ ಕೆಲವು ಹಾಲಿ ಸಂಸದರಿಗೆ ವಯಸ್ಸು ಹಾಗೂ ಅನಾರೋಗ್ಯ ಕಾರಣದಿಂದಾಗಿ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂದು ತಿಳಿಸಿದರು.
ವರಿಷ್ಠರು ಅಭ್ಯರ್ಥಿಗಳ ಮಾಹಿತಿ, ಹಿನ್ನೆಲೆ ತೆಗೆದುಕೊಂಡಿದ್ದಾರೆ. ಕೆಲವರನ್ನು ವಯಸ್ಸು, ಆರೋಗ್ಯ ಕಾರಣದಿಂದ ಬದಲಾವಣೆ ಮಾಡಲಾಗುತ್ತದೆ. ಬಹುತೇಕ ಚರ್ಚೆ ಒಂದು ಹಂತಕ್ಕೆ ಬಂದಿದೆ. ಗೊಂದಲ ಇರುವ ಕ್ಷೇತ್ರಗಳ ಬಗ್ಗೆ ಚರ್ಚೆ ಆಗಬೇಕಿದೆ. ಎರಡು ದಿನಗಳ ಕಾಲ ದೆಹಲಿಯಲ್ಲಿ ಸಭೆ ನಡೆಸಲಾಗಿದೆ. ಒಂದು ಸುತ್ತಿನ ಮಾತುಕತೆ ನಡೆದಿದೆ. ಸಭೆಯಲ್ಲಿ ರಾಜ್ಯ ಕೋರ್ ಕಮಿಟಿ ಕಳಿಸಿದ್ದ ಪಟ್ಟಿ ಬಗ್ಗೆ ಚರ್ಚೆ ಆಗಿದೆ. ಸವಿಸ್ತಾರವಾಗಿ ಅಮಿತ್ ಶಾ, ನಡ್ಡಾ, ಸಂತೋಷ್ ಅವರ ಜೊತೆ ಚರ್ಚೆ ಆಗಿದೆ ಎಂದು ಮಾಹಿತಿ ನೀಡಿದರು.