ಮೂಡಂಬೈಲು ಸರಕಾರಿ ಪ್ರೌಢ ಶಾಲೆಯಲ್ಲಿ ಶತಮಾನೋತ್ಸವ
ಮಂಜೇಶ್ವರ: ಕರ್ನಾಟಕದ ಒಳನಾಡಿನ ಕನ್ನಡ ಮಾಧ್ಯಮ ಶಾಲೆಗಳಿಗಿಂತಲೂ ಅಪ್ರತಿಮ ಸಾಧನೆ, ಹಿರಿಮೆ ಕಾಸರಗೋಡು ಕನ್ನಡ ಶಾಲೆಗಳಿಗಿವೆ. ಕಾಸರಗೋಡಿನ ಕನ್ನಡ ಮಾಧ್ಯಮದ ಶಾಲೆಯಲ್ಲಿರುವ ಅಚ್ಛ ಕನ್ನಡ, ಅಪ್ಪಟ್ಟ ಕನ್ನಡಕ್ಕೆ ತನ್ನದೇ ಆದ ಸ್ಥಾನಮಾನಗಳನ್ನು ಪಡೆದಿದೆ ಎಂದು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕರಾದ ಡಾ. ರತ್ನಾಕರ ಮಲ್ಲಮೂಲೆ ಹೇಳಿದ್ದಾರೆ.
ಅವರು ಮೂಡಂಬೈಲು ಸರಕಾರಿ ಪ್ರೌಢ ಶಾಲೆಯಲ್ಲಿ ಶತಮಾನೋತ್ಸವದಂಗವಾಗಿ ನಡೆದ ವರ್ಷಾಚರಣೆಯ ಉದ್ಘಾಟನಾ ಸಮಾರಂಭವನ್ನು ಇಂದು ಬೆಳಗ್ಗೆ ಶಾಲೆಯ ಪ್ರಾಂಗಣದಲ್ಲಿ ದೀಪ ಬೆಳಗಿಸಿ, ಉದ್ಘಾಟಿಸಿ, ಮಾತನಾಡಿದರು.
ಕನ್ನಡದ ಮೊದಲ ರಾಷ್ಟಕವಿ ಮಂಜೇಶ್ವರದ ಗೋವಿಂದ ಪೈ, ತೆಂಕುತಿಟ್ಟಿನ ಪಿತಾಮಹಾ ಪಾರ್ತಿಸುಬ್ಬ, ಕಯ್ಯಾರ, ಪುಣಿಂಚತ್ತಾಯರು ಮೊದಲಾದ ಹಲವಾರು ಸಾಹಿತಿಗಳು, ಚಿಂತಕರು, ಕಾಸರಗೋಡಿನ ಕನ್ನಡಿಗರು. ಇವರೆಲ್ಲಾ ಪ್ರಪಂಚಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಇವರೆಲ್ಲರಿಗೂ ಕನ್ನಡತನವನ್ನು, ಭದ್ರಬುನಾದಿಯನ್ನು, ಹಾಕಿಕೊಟ್ಟದ್ದು ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಣ ಕೇಂದ್ರಗಳಾಗಿವೆ ಎಂದು ಹೇಳಿದರು. ಹಲವು ಭಾಷೆ, ಸಂಸ್ಕೃತಿಯ ವೈವಿಧ್ಯಮಯವಾದ ಕಾಸರಗೋಡು ನಿಜಕ್ಕೂ ಪ್ರಪಂಚದಲ್ಲೇ ಒಂದು ಹಿರಿಮೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಶ್ರೀಮತಿ ಅಶ್ವಿನಿ ಎಂ.ಎಲ್ ತೆಂಗಿನ ಗರಿ ಅರಳಿಸಿ ಮೂಡಂಬೈಲು ಶಾಲಾ ಶತಮಾನೋತ್ಸವದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಬೆಂಬಲ ಸಮಿತಿ ಅಧ್ಯಕ್ಷ ಶಿವರಾಮ ಪದಕಣ್ಣಾಯ ಶಾಲಾ ಶತಮಾನೋತ್ಸವದ ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿದರು. ಮಿಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲಾಕ್ಷಿ ಕೆ. ಪಾವೂರು, ಮೀಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ, ಮಂಜೇಶ್ವರ ಸಹಾಯಕ ಶಿಕ್ಷಣಾಧಿಕಾರಿ ರಾಜಗೋಪಾಲ, ಮಂಜೇಶ್ವರ ಬ್ಲಾಕ್ ಯೋಜನಾ ಸಂಯೋಜಕ ಜಾಯ್ ಜಿ, ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ರಮಾ ಬೈ ಟೀಚರ್,
ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ಲಾ ಪಜಿಂಗಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮ್ ಪ್ರಕಾಶ್ ಆಳ್ವ, ಮಾತೆಯರ ಸಂಘದ ಅಧ್ಯಕ್ಷ ಶ್ರೀಮತಿ ಸುಮಿತಾ ಎ.ಎಸ್ ಶುಭಾಸಂಶನೆಗೈದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಶಾಲಾ ಮುಖ್ಯೋಪಾಧ್ಯಾಯ ಜಾರ್ಜ್ ಕ್ರಾಸ್ತ ಸಿ.ಎಚ್ ಸ್ವಾಗತಿಸಿ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಎಂ. ದಾಮೋದರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಮೀಯಪದವು ಶಾಲಾ ಯುಪಿ ವಿಭಾಗದ ಮುಖ್ಯೋಪಾಧ್ಯಾಯರಾದ ಅರವಿಂದಾಕ್ಷ ಭಂಡಾರಿ ದಡ್ಡoಗಡಿ ವಿಜ್ಞಾಪನಾ ಪತ್ರ ವಾಚಿಸಿ,ಪದ್ಮನಾಭ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿ, ಪ್ರಚಾರ ಸಮಿತಿ ಅಧ್ಯಕ್ಷ ಜಗದೀಶ್ ಮೂಡಂಬೈಲು ವಂದಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.