ಸೋಡಿಯಂ ಬಳಸಿ ಸ್ಫೋಟ ಪ್ರಕರಣ: ಡ್ರೋನ್ ಪ್ರತಾಪ್‌ನನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ ಕೋರ್ಟ್

ತುಮಕೂರು: ಕೃಷಿ ಹೊಂಡದಲ್ಲಿ ಸೋಡಿಯಂ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್‌ನನ್ನು ಡಿ.26ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಪ್ರಧಾನ ಹಿರಿಯ ಸಿವಿಲ್ ಮತ್ತು ಜೆಎಮ್‌ಎಫ್‌ಸಿ ನ್ಯಾಯಾಲಯ ಆದೇಶ ನೀಡಿದೆ.

ಮೂರು ದಿನ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ಡ್ರೋನ್ ಪ್ರತಾಪ್‌ನನ್ನು ಮಿಡಿಗೇಶಿ ಪೊಲೀಸರು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯಕ್ಕೆ ಕರೆತರುವ ಮುನ್ನ ಮಧುಗಿರಿ ತಾಲೂಕು ಆಸ್ಪತ್ರೆಯಲ್ಲಿ ಡ್ರೋನ್ ಪ್ರತಾಪ್‌ಗೆ ಆರೋಗ್ಯ ತಪಾಸಣೆ ಮಾಡಲಾಗಿತ್ತು.  ಕೋರ್ಟ್‌ ಆದೇಶದ ಹಿನ್ನೆಲೆ ಡ್ರೋನ್‌ ಪ್ರತಾಪ್‌ನನ್ನು ಮಧುಗಿರಿ ಸಬ್‌ ಜೈಲಿಗೆ ಕರೆದೊಯ್ಯಲಾಗುತ್ತದೆ. 

ಪ್ರಕರಣ ಸಂಬಂಧ ಡ್ರೋನ್ ಪ್ರತಾಪ್ ಸ್ನೇಹಿತರಾದ ವಿನಯ್ ಹಾಗೂ ಸೋಡಿಯಂ ಕೊಡಿಸಿದ್ದ ಪ್ರಜ್ವಲ್‌ನನ್ನು ಮಿಡಿಗೇಶಿ ಪೊಲೀಸರು ಬಂಧಿಸಿದ್ದಾರೆ. ಡ್ರೋನ್ ಪ್ರತಾಪ್ ಬೆಂಗಳೂರಿನ ಅವೆನ್ಯೂ ರಸ್ತೆಯ ಅಂಗಡಿಯೊಂದರಲ್ಲಿ ಸೋಡಿಯಂ ಖರೀದಿಸಿದ್ದ. ಈ ಹಿನ್ನೆಲೆ ಸ್ಥಳ ಮಹಜರು ನಡೆಸಿದ ಪೊಲೀಸರು ಶನಿವಾರ ಮಧ್ಯರಾತ್ರಿ ಬೆಂಗಳೂರಿನಲ್ಲಿ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಇನ್ನೋರ್ವ ಆರೋಪಿ ಫಾರಂ ಹೌಸ್ ಮಾಲೀಕ ಜಿತೇಂದ್ರ ಜೈನ್ ಸದ್ಯ ತಲೆಮರೆಸಿಕೊಂಡಿದ್ದಾನೆ.