
ಬಿ.ಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ; ಮಹೇಶ್ ಶೆಟ್ಟಿ ತಿಮರೋಡಿಯಾನು ವಿಚಾರಣೆಗಾಗಿ ಕರೆದೊಯ್ದ ಬ್ರಹ್ಮಾವರ ಪೊಲೀಸರು
ಮಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬ್ರಹ್ಮಾವರ ಪೊಲೀಸರು ವಿಚಾರಣೆಗಾಗಿ ಕರೆದೊಯ್ದಿದ್ದಾರೆ.
ಫೇಸ್ಬುಕ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದ ತಿಮರೋಡಿ, ಬಿ.ಎಲ್ ಸಂತೋಷ್ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ಆರೋಪ ಎದುರಿಸುತ್ತಿದ್ದರು. ಈ ಕುರಿತು ರಾಜೀವ್ ಕುಲಾಲ್ ಅವರು ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಠಾಣೆಯಲ್ಲಿ BNS 196(1),352,353(2) ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತಿಮರೋಡಿಗೆ ಬ್ರಹ್ಮಾವರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. 2 ಬಾರಿ ನೋಟಿಸ್ ಜಾರಿಮಾಡಿದ್ದರೂ ವಿಚಾರಣೆಗೆ ಹಾಜರಾಗದ ಕಾರಣ ಉಜಿರೆಯ ಮನೆಯಲ್ಲಿ ಇಂದು ಬೆಳಗ್ಗೆ ವಶಕ್ಕೆ ಪಡೆದು ಬ್ರಹ್ಮಾವರ ಠಾಣೆಗೆ ಕರೆದೊಯ್ದಿದ್ದಾರೆ.
ಬೆಳಗ್ಗೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಠಾಣೆಯ 30ಕ್ಕೂ ಹೆಚ್ಚು ಪೊಲೀಸರು 8ಕ್ಕೂ ಹೆಚ್ಚು ವಾಹನಗಳಲ್ಲಿ ಭಾರೀ ಬಂದೋಬಸ್ತ್ನಿಂದ ಉಜಿರೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೆ ತೆರಳಿದ್ದರು. ಪೊಲೀಸರು ತೆರಳಿದ್ದ ವೇಳೆ ಮಹೇಶ್ ಶೆಟ್ಟಿ ಹಾಗೂ ಅವರ ಆಪ್ತ ಬಳಗ ಉಜಿರೆಯ ನಿವಾಸದಲ್ಲೇ ಇದ್ದರು. ತಿಮರೋಡಿಯನ್ನು ಕರೆದೊಯ್ಯಲು ಮುಂದಾಗುತ್ತಿದ್ದಂತೆಯೇ ಮತ್ತೊಬ್ಬ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಹಲವು ಬೆಂಬಲಿಗರು ವಿರೋಧಿಸಿದರು. ತಿಮರೋಡಿಯನ್ನು ವಶಕ್ಕೆ ಪಡೆಯೋದು ಸರಿಯಲ್ಲ. ಯಾವ ಕಾರಣಕ್ಕೆ ವಶಕ್ಕೆ ಪಡೆಯುತ್ತಿದ್ದೀರಿ. ಅರೆಸ್ಟ್ ವಾರೆಂಟ್ ತೋರಿಸಿ.. ನಾವು ಠಾಣೆಗೆ ಬಂದಿಲ್ಲ ಅಂದಾಗ ಕ್ರಮ ಕೈಗೊಳ್ಳಿ ಎಂದು ವಾದಿಸಿದರು.
ಮನೆಯ ಆವರಣದಲ್ಲಿ ಪೊಲೀಸರು ಹಾಗೂ ಬೆಂಬಲಿಗರ ನಡುವೆ ವಾಗ್ವಾದ ಜೋರಾಗ್ತಿದ್ರೆ, ಇತ್ತ ಮನೆಯ ಕೋಣೆಯನ್ನು ಲಾಕ್ ಮಾಡಿ ತಿಮರೋಡಿ ಕೂತಿದ್ರು. ತಿಮರೋಡಿಯನ್ನು ತಮ್ಮ ವಶಕ್ಕೆ ಪಡೆಯುವ ಸಂದರ್ಭದಲ್ಲಿ ಅವ್ರ ವಕೀಲರು, ಬೆಂಬಲಿಗರು ಪೊಲೀಸರಿಗೆ ಕ್ಲಾರಿಟಿ ಕೊಡಿ ಎಂದು ಒತ್ತಾಯಿಸಿದ್ರು. ಇದಕ್ಕೆ ಪೊಲೀಸರು, ತಿಮರೋಡಿಯವ್ರೇ ಹೊರ ಬರಲಿ ಎಂದು ಹೇಳಿದ್ದಾರೆ. ಹೀಗಾಗಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ತಮ್ಮ ಕಾರಿನಲ್ಲೇ ಠಾಣೆಗೆ ತೆರಳಿದ ತಿಮರೋಡಿ
ವಾಗ್ದಾದ, ಕೆಲಕಾಲ ಉದ್ವಿಗ್ನ ವಾತಾವರಣ ಬಳಿಕ ಭಾರೀ ಹೈಡ್ರಾಮಾ ಸೃಷ್ಟಿಯಾದರೂ ಮಹೇಶ್ ಶೆಟ್ಟಿ ತಿಮರೋಡಿಯನ್ನು ಪೊಲೀಸರು ಬಂಧಿಸಿದ್ರು. ಆದರೆ ಪೊಲೀಸ್ ವಾಹನದಲ್ಲಿ ಬರುವುದಿಲ್ಲ ಎಂದು ತಿಮರೋಡಿ ನಿರಾಕರಿಸಿದ್ದಾರೆ. ನಂತರ ಅವರೇ ಬರುವುದಾಗಿ ಹೇಳಿದ್ದಾರೆ. ಹೀಗಾಗಿ ಪೊಲೀಸರ ಸುಪರ್ಧಿಯಲ್ಲೇ ತಿಮರೋಡಿ ಖಾಸಗಿ ವಾಹನದಲ್ಲೇ ತೆರಳಿದ್ರು. ಇದೇ ವಾಹನದಲ್ಲಿ ಮತ್ತೊಬ್ಬ ದೂರುದಾರ ಜಯಂತ್, ಗಿರೀಶ್ ಮಟ್ಟಣ್ಣನವರ್ ಸಹ ತೆರಳಿದರು.
ಅತ್ಯಾಚಾರಿಗಳ ಬಂಧನಕ್ಕೆ ಆಗ್ರಹ
ಇನ್ನು ಮನೆಯಿಂದ ಪೊಲೀಸರು ಕರೆದೊಯ್ಯುತ್ತಿದ್ದಾಗ ಮಹೇಶ್ ಶೆಟ್ಟಿ ತಿಮರೋಡಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಳ್ಳು ಕೇಸ್ ಮಾಡಿ ವಶಕ್ಕೆ ಪಡೆದಿದ್ದಾರೆ. ಬಿಜೆಪಿಯವರ ಸುಳ್ಳು ದಾಖಲೆ. ಬಿಜೆಪಿಯವರ ಪಾಪದ ಕೂಸು, ಸೌಜನ್ಯಳಿಗೆ ನ್ಯಾಯ ಸಿಗಬೇಕು. ಅತ್ಯಾಚಾರಿಗಳ ಬಂಧನ ಆಗಬೇಕು ಎಂದು ಆಗ್ರಹಿಸಿದ್ದಾರೆ.