ಬಿಜೆಪಿಯಲ್ಲೂ ನವೆಂಬರ್‌ ನಲ್ಲಿ ಕ್ರಾಂತಿ; ನಿತಿನ್‌ ಗಡ್ಕರಿ ಪ್ರಧಾನಿ ಆಗುತ್ತಾರೆ: ಸಚಿವ ಸಂತೋಷ್‌ ಲಾಡ್‌

ಬೀದರ್: ಕೇಂದ್ರ ಬಿಜೆಪಿಯಲ್ಲೂ ನವೆಂಬರ್‌ ಕ್ರಾಂತಿ ಇದೆ. ನಿತಿನ್‌ ಗಡ್ಕರಿ ಅವರು ಪ್ರಧಾನಿ ಆಗ್ತಾರೆ ಅನ್ನೋ ಮಾಹಿತಿ ಇದೆ ಎಂದು ಸಚಿವ ಸಂತೋಷ್‌ ಲಾಡ್‌ ಹೊಸ ಬಾಂಬ್‌ ಸಿಡಿಸಿದ್ದಾರೆ.

ಬೀದರ್‌ನಲ್ಲಿ ಮಾತನಾಡಿದ ಅವರು, ಡಿನ್ನರ್‌ ಮೀಟಿಂಗ್‌ನಲ್ಲಿ ಸಂಪುಟ ಪುನರ್‌ ರಚನೆ ಬಗ್ಗೆ ಮಾತನಾಡಿಲ್ಲ. ಸಂಪುಟ ಪುನರ್‌ರಚನೆ ಮಾಡುವುದಾದರೆ ಸಿಎಂ -ಡಿಸಿಎಂಗೆ ಪೂರ್ಣ ಅಧಿಕಾರ ಇದೆ. ಅಲ್ಲದೇ ನಮಗೂ ಕೇಂದ್ರದ ನವೆಂಬರ್ ಕ್ರಾಂತಿ ಬಗ್ಗೆ ಕುತೂಹಲವಿದೆ. ನಿತಿನ್ ಗಡ್ಕರಿ ಅವರು ಪ್ರಧಾನಿ ಆಗ್ತಾರೆ ಅನ್ನೋ ಮಾಹಿತಿ ಇದೆ ಎಂದು ಹೇಳಿದ್ದಾರೆ.

ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ಆರ್‌ಎಸ್‌ಎಸ್‌ ಬ್ಯಾನ್‌ ಬಗ್ಗೆ ಮಾತನಾಡಿದ ಅವರು, 145 ಕೋಟಿ ಭಾರತೀಯರೂ ದೇಶ ಪ್ರೇಮಿಗಳೇ ಆರ್‌ಎಸ್‌ಎಸ್‌ಗೆ ವಿಶೇಷವಾಗಿ ದೇಶ ಪ್ರೇಮ ಇಲ್ಲ ಎಂದರು. ಸರ್ದಾರ ವಲ್ಲಭಭಾಯಿ ಪಟೇಲ್ ಎರಡು ಬಾರಿ ಆರ್‌ಎಸ್‌ಎಸ್ ಬ್ಯಾನ್ ಮಾಡಿದ್ದರು.

ಬಿಜೆಪಿ ಅವರೇ ಸರ್ದಾರ ವಲ್ಲಭಭಾಯಿ ಪಟೇಲ್ ಪ್ರತಿಮೆಯನ್ನು 3 ಸಾವಿರ ಕೋಟಿ ರೂ. ಖರ್ಚು ಮಾಡಿ ಸ್ಥಾಪನೆ ಮಾಡಿದ್ದಾರೆ. ಸರ್ದಾರ ವಲ್ಲಭಭಾಯಿ ಪಟೇಲ್ ಅವರು ಕಾಂಗ್ರೆಸ್ಸಿಗರು ಮತ್ತು ಗೃಹಸಚಿವರಾಗಿದ್ದವರು ಎಂಬುವುದು ಬಿಜೆಪಿ ಗಮನಕ್ಕಿರಲಿ ಎಂದರು.

ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಗ್ಯಾರಂಟಿ ಹೊರೆಯಿಂದ ಅಭಿವೃದ್ಧಿ ಕುಂಠಿತ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಲಾಡ್, ನಮ್ಮ ಗ್ಯಾರಂಟಿಗಳನ್ನ ಹಿಡಿದುಕೊಂಡು ಮೋದಿ ಓಡಾಡುತ್ತಿದ್ದಾರೆ. ಬಿಹಾರ್ ಎಲೆಕ್ಷನ್‌ನಲ್ಲಿ ಮಹಿಳೆಯರಿಗೆ ಒಂದು ಮತಕ್ಕೆ 10 ಸಾವಿರ ರೂ. ಕೊಡುತ್ತಿದ್ದಾರೆ. ಮೋದಿ ಸಾಹೇಬ್ರು ನಮ್ಮ ಗ್ಯಾರಂಟಿಗಳನ್ನ ಬಿಹಾರ ಚುನಾವಣೆಯಲ್ಲಿ ಬಳಸುತ್ತಿದ್ದಾರೆ ಎಂದು ಕಿಡಿ ಕಾರಿದರು.